ಅಮ್ಮಾನ್ : ಜೋರ್ಡಾನ್ ಮೂಲಕ ಅಕ್ರಮವಾಗಿ ಇಸ್ರೇಲ್ ಪ್ರವೇಶಿಸಲು ಯತ್ನಿಸಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಜೋರ್ಡಾನ್ ಸೈನಿಕರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೇರಳದ ಥಂಬಾ ನಿವಾಸಿ ಥಾಮಸ್ ಗೇಬ್ರಿಯಲ್ ಪೆರೆರಾ (47) ಜೋರ್ಡಾನ್ ಸೈನಿಕರ ಗುಂಡಿಗೆ ಬಲಿಯಾದ ವ್ಯಕ್ತಿ. ಗಡಿ ದಾಟಿ ಇಸ್ರೇಲ್ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿರುವಾಗ ಜೋರ್ಡಾನ್ ಸೈನಿಕರ ಗುಂಡಿಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.
ಪೆರೆರಾ ಸಂದರ್ಶಕ ವೀಸಾದಲ್ಲಿ ಜೋರ್ಡಾನ್ಗೆ ತೆರಳಿದ್ದ. ಪೆರೆರಾ ಜೊತೆಗೆ ಆತನ ಸ್ನೇಹಿತ (ಮೇನಮ್ಕುಲಂ ನಿವಾಸಿ) ಕೂಡ ಇಸ್ರೇಲ್ ಗಡಿ ದಾಟಲು ಪ್ರಯತ್ನಿಸಿದ್ದ. ಈ ವೇಳೆ ಭದ್ರತಾ ಪಡೆಗಳು ಎಚ್ಚರಿಕೆ ನೀಡಿದವು. ಆದರೆ ಅವರು ಭದ್ರತಾ ಸಿಬ್ಬಂದಿಯ ಮೇಲೆಯೇ ಗುಂಡು ಹಾರಿಸಲು ಮುಂದಾಗಿದ್ದು, ಅನಿವಾರ್ಯವಾಗಿ ಗುಂಡುಹಾರಿಸಬೇಕಾಯಿತು ಎಂದು ಜೋರ್ಡಾನ್ ಸೇನೆ ತಿಳಿಸಿರುವುದಾಗಿ ಭಾರತೀಯ ರಾಯಭಾರ ಕಚೇರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಸದ್ಯ ಈ ಕುರಿತು ಮೃತರ ಕುಟುಂಬಸ್ಥರಿಗೆ ತಿಳಿಸಿರುವ ಭಾರತೀಯ ರಾಯಭಾರ ಕಚೇರಿ ಜೋರ್ಡಾನ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದೆ. ಸದ್ಯದಲ್ಲೇ ಮೃತದೇಹವನ್ನು ಪರಿಶೀಲಿಸಲು ತೆರಳಲಿದೆ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಇನ್ನು ಈ ನಡುವೆ ಪೆರೆರಾ ಮೃತದೇಹವನ್ನ ಮನೆಗೆ ತರಲು ಸಹಾಯ ಮಾಡುವಂತೆ ಕುಟುಂಬವು ರಾಯಭಾರ ಕಚೇರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ.