ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಏ. 27) ರೇಡಿಯೋ ಕಾರ್ಯಕ್ರಮದ 121 ನೇ ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿ ಅವರು ರಾಷ್ಟ್ರ ಮತ್ತು ಜಗತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಭಯೋತ್ಪಾದಕ ವಿರುದ್ಧ ಗುಡುಗಿದ ಮೋದಿ ಕಾಶ್ಮೀರದಲ್ಲಿ ಶಾಂತಿ ಮರಳುತ್ತಿದೆ, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತ್ವರಿತ ಪ್ರಗತಿ ಇದೆ ಎಂದು ಹೇಳಿದ್ದಾರೆ. ಕಾಶ್ಮೀರದ ಶತ್ರುಗಳು ಮತ್ತೊಮ್ಮೆ ಶಾಂತಿ ಕದಡಲು ಪ್ರಯತ್ನಿಸಿದ್ದಾರೆ. ಆದರೆ ಅದಕ್ಕೆಲ್ಲ ಹೆದರೋಲ್ಲಾ, ಅಲ್ಲಿ ಅಭಿವೃದ್ದಿ ಆಗಿಯೇ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ. ಈ ದಾಳಿಯು ಭಯೋತ್ಪಾದಕರ ಹತಾಶೆಯ ಪ್ರತಿಬಿಂಬವಾಗಿದೆ, ವಿಶೇಷವಾಗಿ ಕಾಶ್ಮೀರದಲ್ಲಿ ಶಾಂತಿ ಮರಳುತ್ತಿರುವಾಗ ಮತ್ತು ಪ್ರದೇಶದ ಶತ್ರುಗಳು ಈ ಪ್ರಗತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಈ ಭೀಕರ ದಾಳಿಯನ್ನು ಖಂಡಿಸಿ ವಿಶ್ವ ನಾಯಕರು ಕರೆಗಳು, ಪತ್ರಗಳು ಮತ್ತು ಸಂದೇಶಗಳ ಮೂಲಕ ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದಲ್ಲಿ, ಇಡೀ ಜಗತ್ತು 1.4 ಬಿಲಿಯನ್ ಭಾರತೀಯರೊಂದಿಗೆ ನಿಂತಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಸಿಗುತ್ತದೆ ಮತ್ತು ದಾಳಿಯ ಹಿಂದಿನ ಅಪರಾಧಿಗಳು ಮತ್ತು ಮಾಸ್ಟರ್ ಮೈಂಡ್ಗಳು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.
ವಿಪತ್ತು ನಿರ್ವಹಣೆ ಕುರಿತು ಪ್ರಧಾನಿ ಚರ್ಚೆ
ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಪತ್ತು ನಿರ್ವಹಣೆಯ ಕುರಿತು ಚರ್ಚೆ ನಡೆಸಿದ್ದಾರೆ. ಯಾವುದೇ ನೈಸರ್ಗಿಕ ವಿಕೋಪವನ್ನು ಎದುರಿಸುವಾಗ ಜಾಗರೂಕತೆ ಮತ್ತು ಎಚ್ಚರಿಕೆ ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟಿದೆ. ಅದಕ್ಕಾಗಿಯೇ ಸರ್ಕಾರ ‘ಸಾಚೆಟ್’ ಎಂದು ಹೆಸರಿಸಲಾದ ಈ ಅಪ್ಲಿಕೇಶನ್, ನೈಸರ್ಗಿಕ ವಿಕೋಪದ ಸಮಯದಲ್ಲಿ ಜನರು ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ‘ಸಾಚೆಟ್’ ಅಪ್ಲಿಕೇಶನ್ ಅನ್ನು ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಭಿವೃದ್ಧಿಪಡಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಬಾಹ್ಯಾಕಾಶ ಯಾನ
ಗಗನಯಾನ, ಸ್ಪಾಡೆಕ್ಸ್ ಮತ್ತು ಚಂದ್ರಯಾನ -4 ನಂತಹ ಮಹತ್ವದ ಯೋಜನೆಗಳಿಗೆ ಭಾರತ ಸಿದ್ಧತೆ ನಡೆಸುತ್ತಿದ್ದು, ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಭಾರತ ಸಜ್ಜಾಗಿದೆ. ಭಾರತವು ವೀನಸ್ ಆರ್ಬಿಟರ್ ಮಿಷನ್ ಮತ್ತು ಮಾರ್ಸ್ ಲ್ಯಾಂಡರ್ ಮಿಷನ್ನಲ್ಲೂ ಕೆಲಸ ಮಾಡುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ದೇಶದ ಬಾಹ್ಯಾಕಾಶ ವಿಜ್ಞಾನಿಗಳ ನಾವೀನ್ಯತೆಗಳನ್ನು ಅವರು ಶ್ಲಾಘಿಸಿದ್ದಾರೆ. ಭಾರತವು ಈಗ ತನ್ನ ಬಾಹ್ಯಾಕಾಶ ವಲಯವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದೆ, ಅನೇಕ ಯುವ ಉದ್ಯಮಿಗಳು ಬಾಹ್ಯಾಕಾಶ ನವೋದ್ಯಮಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತವು ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ದಾಖಲೆ ನಿರ್ಮಿಸುವ ಮೂಲಕ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಮಾರ್ಪಟ್ಟಿದೆ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತ, ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಉಡಾವಣೆ ಮಾಡಿತು ಮತ್ತು ಆದಿತ್ಯ ಎಲ್ 1 ಮಿಷನ್ ಮೂಲಕ ಸೂರ್ಯನಿಗೆ ಹೆಚ್ಚು ಹತ್ತಿರವಾದ ಸಾಹಸ ಮಾಡಿದೆ ಎಂಬುದನ್ನು ಮೋದಿ ಉಲ್ಲೇಖಿಸಿದ್ದಾರೆ.