ನವದೆಹಲಿ :ಹೋಟೆಲ್ಗಳಲ್ಲಿ, ಅಂಗಡಿ ಹಾಗೂ ಪ್ರಯಾಣದ ಸಮಯದಲ್ಲಿ ಆಧಾರ್ ಫೋಟೋ ಪ್ರತಿಯನ್ನು ಹಸ್ತಾಂತರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದೀಗ ಡಿಜಿಟಲ್ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಗೌಪ್ಯತೆಯನ್ನು ಹೆಚ್ಚಿಸುವ ಮತ್ತು ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಆಧಾರ್ ಪರಿಶೀಲನೆಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.
ಬಳಕೆದಾರರ ನಿಯಂತ್ರಣ ಮತ್ತು ಗೌಪ್ಯತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ ಎಂದು ಅಶ್ವಿನಿ ವೈಷ್ಣವ್ ಎಕ್ಸ್ ಖಾತೆಯಲ್ಲಿ ವೀಡಿಯೋ ಮೂಲಕ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಿದರು.
ಪ್ರಸ್ತುತ ಈ ಅಪ್ಲಿಕೇಶನ್ ಬೀಟಾ ಪರೀಕ್ಷಾ ಹಂತದಲ್ಲಿದ್ದು, ಫೇಸ್ ಐಡಿ ದೃಢೀಕರಣವನ್ನು ಪರಿಚಯಿಸುತ್ತದೆ. ಇನ್ನು ಆಧಾರ್ ಕಾರ್ಡ್ಗಳ ಮತ್ತು ಜೆರಾಕ್ಸ್ ಪ್ರತಿಗಳ ಅಗತ್ಯ ಇರುವುದಿಲ್ಲ. ಬಳಕೆದಾರರ ಆಧಾರ್ ಪರಿಶೀಲನೆ ಭೌತಿಕವಾಗಿ ಇರದೇ ಡಿಜಿಟಲ್ ರೂಪದಲ್ಲಿ ಪರಿಶೀಲನೆ ಆಗಲಿದೆ.
ಈ ಹೊಸ ಅಪ್ಲಿಕೇಶನ್ ಆಧಾರ್ ಪರಿಶೀಲನೆಯನ್ನು ಯುಪಿಐ (UPI) ಪಾವತಿಗಳಂತೆ ಸುಲಭಗೊಳಿಸುತ್ತದೆ. ಬಳಕೆದಾರರಿಗೆ ಡಿಜಿಟಲ್ ದೃಢೀಕರಣಕ್ಕಾಗಿ ತಡೆರಹಿತ ಅನುಭವವನ್ನು ನೀಡುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವೀಡಿಯೋದ ಮೂಲಕ ತಿಳಿಸಿದ್ದಾರೆ.
ಈ ಹೊಸ ಅಪ್ಲಿಕೇಶನ್ನಲ್ಲಿ ಬಳಕೆದಾರರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಗತ್ಯ ದಾಖಲೆಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಬಹುದು. ಈ ತಂತ್ರಜ್ಞಾನವು ಗೌಪ್ಯತೆಯನ್ನು ಖಚಿತಪಡಿಸುತ್ತದೆ. ಇದು ಜೆರಾಕ್ಸ್ ಪ್ರತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕೇಂದ್ರ ತಿಳಿಸಿದೆ.