ಬೆಂಗಳೂರು: ಶಾಲಾ ಮಕ್ಕಳಿಗೆ ಪ್ಲೇವರ್ಡ್ ಹಾಲು ನೀಡುವ ಬಗ್ಗೆ ಬಮೂಲ್ ನೂತನ ನಿರ್ದೇಶಕ ಡಿಕೆ ಸುರೇಶ್ ಶಾಲಾ ಶಿಕ್ಷಣ ಇಲಾಖೆಗೆ ಪ್ರಸ್ತಾಪಿಸಿದ್ದಾರೆ.
ಶಾಲಾ ಮಕ್ಕಳಿಗೆ ಚಾಕೊಲೇಟ್, ಬಾದಾಮಿ, ಸ್ಟ್ರಾಬೆರಿ ಸೇರಿ ವಿವಿಧ ಪ್ಲೇವರ್ಗಳ ಹಾಲು ನೀಡಲು ಶಿಕ್ಷಣ ಇಲಾಖೆಯೊಂದಿಗೆ ಪ್ರಾಯೋಗಿಕ ಯೋಜನೆಯ ಪ್ರಸ್ತಾಪವನ್ನು ಡಿಕೆ ಸುರೇಶ್ ಮುಂದಿಟ್ಟಿದ್ದಾರೆ.
ಮಕ್ಕಳಿಗೆ ಕೊಡುತ್ತಿರುವ ಪೌಡರ್ ರೂಪದ ಹಾಲು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ಸರಿಯಾಗಿ ಹಾಲು ಸಿಗುತ್ತಿಲ್ಲ. ಇದನ್ನು ತಪ್ಪಿಸಲು ನೇರ ಹಾಲು ಪೂರೈಕೆ ಮಾಡುವುದು ಬಮೂಲ್ ನಿರ್ದೇಶಕರ ಯೋಜನೆಯಾಗಿದೆ. ಸಾಮಾನ್ಯ ಹಾಲಿನ ದರ ಕೊಟ್ಟರೆ, ಟೆಟ್ರಾ ಪ್ಯಾಕೆಟ್ನಲ್ಲಿ ಮಕ್ಕಳಿಗೆ ಪೂರೈಕೆ ಮಾಡುತ್ತೇವೆ. ಟೆಟ್ರಾ ಪ್ಯಾಕೆಟ್ನಲ್ಲಿ ಶಾಲಾ ಮಕ್ಕಳಿಗೆ ವಿವಿಧ ಪ್ಲೇವರ್ಡ್ ಹಾಲು ಪೂರೈಕೆ ಮಾಡಲಾಗುತ್ತದೆ.
ಶಾಲಾ ಮಕ್ಕಳಿಗೆ ಪ್ಲೇವರ್ಡ್ ಹಾಲು ಪೂರೈಸುವ ಬಗ್ಗೆ ಡಿಕೆ ಸುರೇಶ್ ಅವರು ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ವಿಚಾರವಾಗಿ ಮುಂದಿನ ವಾರ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಲಿದ್ದಾರೆ. ಒಂದು ವೇಳೆ ಸಿಎಂ ಗ್ರೀನ್ಸಿಗ್ನಲ್ ನೀಡಿದರೆ, ಶಾಲಾ ಮಕ್ಕಳಿಗೆ ಪ್ಲೇವರ್ಡ್ ನಂದಿನಿ ಹಾಲು ಪೂರೈಕೆಯಾಗಲಿದೆ.
ಬಮೂಲ್ ನಿರ್ದೇಶಕರಾಗಿ ಆಯ್ಕೆಯಾದ ಬೆನ್ನಲ್ಲೇ ಡಿಕೆ ಸುರೇಶ್, ನಂದಿನಿ ಹಾಲಿನ ಪ್ಯಾಕೆಟ್ಟೆ ಹೊಸರೂಪ ಕೊಡಲು ಚಿಂತನೆ ನಡೆಸಿದ್ದರು. ಸದ್ಯ ಪಾಲಿಥಿನ್ ಪ್ಯಾಕೆಟ್ಗಳಲ್ಲಿ ನಂದಿನಿ ಹಾಲು ಮಾರಾಟವಾಗುತ್ತಿದ್ದು, ವಿದೇಶದಲ್ಲಿ ಬಳಕೆಯಲ್ಲಿರುವ ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್ ಕವರ್ ತಯಾರಿಕೆಗೆ ಚಿಂತನೆ ನಡೆಸಿದೆ ಎಂದು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿಕೆ ಸುರೇಶ್ ಹೇಳಿದ್ದರು.
ನೂತನ ತಂತ್ರಜ್ಞಾನದಡಿ ತಯಾರಿಸಲಾಗುವ ಬಯೋಡಿಗ್ರೇಡೇಬಲ್ ಪ್ಯಾಕೇಟ್ಗಳು ಕೇವಲ 6 ತಿಂಗಳಲ್ಲಿ ಮಣ್ಣಿನಲ್ಲಿ ಕರಗುವ ಸಾಮರ್ಥ್ಯ ಹೊಂದಿವೆ ಎನ್ನಲಾಗಿದ್ದು, ನಕಪುರದ ಶಿವನಹಳ್ಳಿಯಲ್ಲಿ ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್ ಕವರ್ ತಯಾರಿಕೆ ಪ್ರಯೋಗ ಈ ತಿಂಗಳಿನಿಂದಲೇ ಆರಂಭವಾಗಲಿದೆ ಎನ್ನಲಾಗಿದೆ.