ಮೈಸೂರು :ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಪರೀಕ್ಷೆಯಲ್ಲಿ ಒಂದು ಬಾರಿ ಪಾಸಾಗುವುದೇ ಕಷ್ಟ. ಆದರೆ, ಕಣ್ಣೇ ಕಾಣದ ಈ ವಿದ್ಯಾರ್ಥಿನಿ ಎರಡೆರಡು ಬಾರಿ ಆಯ್ಕೆಯಾಗಿ ಮೇಘನಾ ಅಚ್ಚರಿ ಮೂಡಿಸಿದ್ದಾರೆ. ಅವರ ಕುತೂಹಲಕಾರಿ ಕಥೆ ಇಲ್ಲಿದೆ.
2022ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ಪರೀಕ್ಷೆಯಲ್ಲಿ ಮೈಸೂರು ಮೂಲದ ಕೆ.ಟಿ. ಮೇಘನಾ ಅವರು 425ನೇ rank ಪಡೆದಿದ್ದಾರೆ. 2020ರಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲೂ ಆಯ್ಕೆಯಾಗಿದ್ದರು. ಆದರೆ, rank ಕಡಿಮೆ ಬಂದ ಕಾರಣ ಮತ್ತೆ ಪರೀಕ್ಷೆ ಬರೆದಿದ್ದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಮೂಲದವರಾದ ಇವರು ಹಾಲಿ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ. ತಾಂಡವಮೂರ್ತಿ ಹಾಗೂ ನವನೀತ ದಂಪತಿ ಪುತ್ರಿ ಮೇಘನಾ ಅವರು ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ.
10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ, ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ತಮಗಿರುವ ಈ ವೈಫಲ್ಯವನ್ನು ಮೆಟ್ಟಿನಿಂತು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
2020ನೇ ಸಾಲಿನಲ್ಲೂ ಮೇಘನ 465ನೇ rank ಪಡೆದಿದ್ದರು. ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದ ಮೇಘನಾ, 2015ನೇ ಬ್ಯಾಚ್ ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ rank ಪಡೆದು ಪಾಸಾಗಿ ಅಧಿಕಾರಿಯಾಗಿದ್ದಾರೆ.
ಮೇಘನಾ ಜಾಬ್ ಅಕ್ಸೆಸ್ ವಿಥ್ ಸ್ಪೀಚ್ (ಜಾಸ್) ಎಂಬ ಸಾಫ್ಟ್ವೇರ್ ಸಹಾಯದಿಂದ ಇವರು ಪರೀಕ್ಷೆ ತಯಾರಿ ನಡೆಸಿದ್ದಾರೆ. ಇದೊಂದು ಸತತ ಪ್ರಯತ್ನವಾಗಿದ್ದು, ಸಾಕಷ್ಟು ಪರಿಶ್ರಮ ವಹಿಸಬೇಕಿದೆ. ಯುಪಿಎಸ್ಸಿ ಪರೀಕ್ಷೆಯು ಸುದೀರ್ಘ ಪ್ರಕ್ರಿಯೆಯಾಗಿದೆ. ಪರೀಕ್ಷೆಯ ಮೂರೂ ಹಂತಗಳಾದ ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನ ಹಂತಗಳಿಗೆ ವಿಭಿನ್ನವಾದ ತಯಾರಿ ನಡೆಸಬೇಕಿದೆ.
ಅಂಧ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಸ್ಕ್ರೈಬ್ ಫೆಸಿಲಿಟಿ ಲಭ್ಯವಿದೆ. ಅಂದರೆ, ಬೇರೊಬ್ಬರ ಸಹಾಯ ಪಡೆದು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆ ಬರೆಯಲು ಯುಪಿಎಸ್ಸಿಯೇ ಯಾರನ್ನಾದರೂ ನೇಮಿಸುತ್ತದೆ. ಅಥವಾ, ನಾವೇ ಯಾರನ್ನಾದರೂ ಕರೆದುಕೊಂಡು ಹೋಗಬಹುದು. ಆದರೆ, ಅವರು ಪದವಿಯನ್ನು ಪೂರ್ಣಗೊಳಿಸಿರಬಾರದು. ಕೆಪಿಎಸ್ಸಿಯಲ್ಲಿ ಪ್ರತಿ ಗಂಟೆಗೆ ಹೆಚ್ಚುವರಿಯಾಗಿ 10 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಯುಪಿಎಸ್ಸಿಯಲ್ಲಿ ಪ್ರತಿ ನಿಮಿಷಕ್ಕೆ 20 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಈ ಮೂಲಕ ಸಾಧನೆ ಮಾಡಿ ಯಶಸ್ಸು ಪಡೆದಿದ್ದಾರೆ.

































