ಬೆಂಗಳೂರು : ಬಿಜೆಪಿ ಅವರಿಂದ ನಾವು ಸಂವಿಧಾನದ ಬಗ್ಗೆ ಕಲಿಯೋ ಅವಶ್ಯಕತೆ ಇಲ್ಲ. ಸಂವಿಧಾನ ರಕ್ಷಣೆ ನಮ್ಮ ಪಕ್ಷದ ನಿಲುವು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಕೊಟ್ಟಿಲ್ಲ. ಡಿಕೆಶಿ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು ಎಂಬ ಬಿಜೆಪಿ ನಾಯಕರ ಆಗ್ರಹಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಅನಂತ್ ಕುಮಾರ್ ಹೆಗಡೆ ಮಾತಾಡಿದಾಗ ಬೀದಿಗಳಿದು ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದ್ರು. ಹೇಳಿದ ಕೂಡಲೇ ಯಾಕೆ ಹೆಗಡೆ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಡಿಕೆಶಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ತಿದ್ದುಪಡಿ ಬಗ್ಗೆ ನ್ಯಾಯಾಲಯದ ಉಲ್ಲೇಖ ಮಾಡಿ ಮಾತಾಡಿದ್ದಾರೆ ಅಷ್ಟೇ ಎಂದು ಡಿಕೆಶಿ ಪರ ಸಮರ್ಥನೆ ಮಾಡಿಕೊಂಡಿದ್ದಾರೆ.
371 ಜೆ ತಿದ್ದುಪಡಿ ಅಲ್ಲವಾ? ನಾವು ಅದನ್ನ ಮಾಡಿದ್ದು. ಕಾಲಕಾಲಕ್ಕೆ ತಿದ್ದುಪಡಿ ಮಾಡಿಕೊಳ್ಳಬಹುದು ಅಂತ ಅಂಬೇಡ್ಕರ್ ಅವರೇ ಹೇಳಿದ್ದಾರೆ. ಮನುಸ್ಮೃತಿ ನಮ್ಮ ಸಂವಿಧಾನ ಆಗಬೇಕು ಅಂತ ಹೇಳಿದವರು ಬಿಜೆಪಿ ಅವರು. ಅಬ್ ಕೀ ಬಾರ್ ಮೋದಿ ಸರ್ಕಾರ. 400 ಸ್ಥಾನ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದವರು ಬಿಜೆಪಿಯವರು. ಅಮಿತ್ ಶಾ ಸದನದಲ್ಲಿ ಅಂಬೇಡ್ಕರ್ ಬಗ್ಗೆ ಜಪ ಮಾಡಬೇಡಿ ಅಂದರು. ಅದರ ಬಗ್ಗೆ ಯಾರು ಮಾತಾಡಲ್ಲ. ಬಿಜೆಪಿ ಅವರು 400 ಸ್ಥಾನ ಬಂದಿದ್ದರೇ ಸಂವಿಧಾನ ಬದಲಾವಣೆ ಮಾಡಿರೋರು. ಅದಕ್ಕೆ ಜನರು ಅವಕಾಶ ಕೊಡಲಿಲ್ಲ ಎಂದಿದ್ದಾರೆ.
ಇನ್ನು ಯತ್ನಾಳ್ ಉಚ್ಚಾಟನೆ ವಿಚಾರವಾಗಿ ಮಾತನಾಡಿದ ಅವರು, ಯತ್ನಾಳ್ ಉಚ್ಚಾಟನೆ ಬಿಜೆಪಿಯ ವೈಯಕ್ತಿಕ ವಿಚಾರ. ನಾವು ಅದರ ಬಗ್ಗೆ ಮಾತಾಡಲ್ಲ. ಅವರ ಪಾರ್ಟಿ ಅವರು ಅವರನ್ನು ಇಟ್ಟುಕೊಳ್ತಾರೋ, ತೆಗೆದು ಹಾಕ್ತಾರೋ ನಮಗೆ ಸಂಬಂಧವಿಲ್ಲ. ಬಿಜೆಪಿಯವರು ಶಾಸಕ ಯತ್ನಾಳ್ ಉಚ್ಚಾಟನೆ ಮಾಡುವ ಮೂಲಕ ಬಿಜೆಪಿ ಶುದ್ಧೀಕರಣ ಸಾಧ್ಯವಿಲ್ಲ, ಭ್ರಷ್ಟಾಚಾರ, ಕುಟುಂಬ ರಾಜಕೀಯಕ್ಕೆ ನಮ್ಮ ಬೆಂಬಲ ಅಂತ ತೋರಿಸಿದ್ದಾರೆ ಎಂದು ಲೆವಡಿ ಮಾಡಿದ್ದಾರೆ.
ಮುಂದುವರೆದು ಯತ್ನಾಳ್ ಅವರು ಕುಟುಂಬ ರಾಜಕೀಯ, ಭ್ರಷ್ಟರ ವಿರುದ್ದ ಹೋರಾಟ ಮಾಡ್ತಿದ್ದರು. ಈಗ ಯತ್ನಾಳ್ ಅವರ ಬಿಜೆಪಿ ಶುದ್ಧೀಕರಣ ಹೋರಾಟಕ್ಕೆ ಕೇಂದ್ರದ ಹೈಕಮಾಂಡ್ ಜಟ್ಕಾ ಕಟ್ ಹೊಡೆದಿದ್ದಾರೆ ಎಂದಿದ್ದಾರೆ.