ಯಕ್ಷಗಾನ ಕಲಾವಿದ ಕಾಲ್ತೋಡು ಗ್ರಾಮದ ಬಲಗೋಣ ನಿವಾಸಿ, ದಿ.ಕೊಪ್ಪಾಟಿ ಮುತ್ತ ಗೌಡ ಅವರು ಪುತ್ರ ದಾಮೋದರ ಗೌಡ (33) ಅವರು ಅ. 3ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿ ಊಟ ಮಾಡಿ ಮಲಗಿದ್ದ ಅವರು ಬೆಳಗ್ಗೆ ಮನೆಮಂದಿ ನೋಡಿದಾಗ ಮಲಗಿಕೊಂಡ ಸ್ಥಳದಲ್ಲಿ ಇರಲಿಲ್ಲ, ಹುಡುಕಾಡಿದಾಗ ಮನೆಯಿಂದ 500 ಮೀ. ದೂರದಲ್ಲಿನ ಮರಕ್ಕೆ ತನ್ನದೇ ಬನಿಯನನ್ನು ಹರಿದು ಹಗ್ಗ ಮಾಡಿಕೊಂಡು ನೇಣು ಬಿಗಿದುಕೊಂಡಿರುವುದು ಕಂಡುಬಂದಿತ್ತು. ತತ್ಕ್ಷಣ ನೇಣಿನಿಂದ ಇಳಿಸಿದರೂ ಕೊನೆಯುಸಿರೆಳೆದಾಗಿತ್ತು.
ಅವರು ದಂಪತಿಯ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತ ಪತ್ನಿ ಪ್ರತ್ಯೇಕ ವಾಸಿಸುತ್ತಿದ್ದರು.ಜೀವನದಲ್ಲಿ ಜುಗುಪ್ಪೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಮೋದರ ಗೌಡ ಅವರು ತನ್ನ ಶಾಲೆಯ ದಿನಗಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಳಿಕ ಉಪ್ಪುಂದ ಪರಿಸರದ ಹೊಟೇಲ್ನಲ್ಲಿ ಕೆಲಸ ಮಾಡಿಕೊಂಡು ಯಕ್ಷಗಾನ ಮೇಳಗಳಲ್ಲಿ ವಿವಿಧ ಪಾತ್ರ ಮಾಡುತ್ತಿದ್ದರು. ಆರಂಭದಲ್ಲಿ ಬೊಳ್ಳಂಬಳ್ಳಿ ಮೇಳ, ಮಂದಾರ್ತಿ ಮೇಳ, ಕಮಲಶಿಲೆ, ಪ್ರಸ್ತುತ ಬೈಂದೂರು ಕಳವಾಡಿ ಈಶ್ವರ ಮಾರಿಕಾಂಬಾ ಮೇಳದಲ್ಲಿ ವೇಷಧಾರಿಯಾಗಿದ್ದರು.