ಬೆಂಗಳೂರು : ದೇಶಾದ್ಯಂತ ಜಾರಿಯಾಗಿರುವ ನೂತನ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಮೊದಲನೇ ದಿನ (ಜುಲೈ 1) ಬೆಂಗಳೂರು ನಗರದಲ್ಲಿ ಒಟ್ಟು 38 ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ನೂತನ ಕಾನೂನಿನನ್ವಯ ಬೆಂಗಳೂರು ನಗರದಲ್ಲಿ ಮೊದಲನೇ ದಿನ ಸುಗಮವಾಗಿ ಸುಸೂತ್ರವಾಗಿ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದ್ದು, ಯಾವುದೇ ರೀತಿಯ ಕಾನೂನಿನ ಅಡಚಣೆಯಾಗಲಿ, ತಾಂತ್ರಿಕ ಸಮಸ್ಯೆಯಾಗಲಿ ಆಗಿಲ್ಲ ಎಂದು ಅವರು ತಿಳಿಸಿದರು. ಸೋಮವಾರ ಬೆಂಗಳೂರಿನಲ್ಲಿ ಒಟ್ಟು 38 ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಭಾರತೀಯ ನ್ಯಾಯ ಸಂಹಿತೆಯಡಿ 31, ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ 7 ಪ್ರಕರಣಗಳು ದಾಖಲಾಗಿವೆ ಎಂದು ಆಯುಕ್ತರು ಮಾಹಿತಿ ನೀಡಿದರು. ಜುಲೈ 1ರಿಂದ ದೇಶದಾದ್ಯಂತ ಅನುಷ್ಠಾನಕ್ಕೆ ಬಂದಿರುವ ನೂತನ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023, ಭಾರತೀಯ ಸಾಕ್ಷ್ಯ ಅಧಿನಿಯಮ-2023ರ ಕುರಿತು ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ 7 ವಲಯಗಳು, 6 ಕಮಿಷನರೇಟ್ ಘಟಕಗಳು ಹಾಗೂ 1063 ಪೊಲೀಸ್ ಠಾಣೆಗಳು ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿತ್ತು.
