ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಜಪ್ತಿ ಮಾಡಿರುವ ತಮ್ಮ ಹಣವನ್ನ ವಾಪಸ್ ನೀಡಲು ಸೂಚಿಸುವಂತೆ ಆರೋಪಿಗಳಾದ ದರ್ಶನ್ ಹಾಗೂ ಪ್ರದೋಷ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ದರ್ಶನ್, ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಮತ್ತೋರ್ವ ಆರೋಪಿ ಪ್ರದೋಷ್ ಮನೆಯಲ್ಲಿದ್ದ, ಆರೋಪಿಗಳು ಸಾಕ್ಷ್ಯನಾಶಕ್ಕಾಗಿ ಸಂಗ್ರಹಿಸಿಡಲಾಗಿದ್ದು ಎನ್ನಲಾದ 40.40 ಲಕ್ಷ ನಗದು ಹಣವನ್ನ ಜಪ್ತಿ ಮಾಡಿದ್ದರು. ಇಷ್ಟೊಂದು ಪ್ರಮಾಣದ ನಗದನ್ನ ಮನೆಯಲ್ಲಿ ಇಟ್ಟಿದ್ದು ಯಾಕೆ ಎಂದು ಆದಾಯ ತೆರಿಗೆ ಇಲಾಖೆ ದರ್ಶನ್ ಅವರನ್ನ ಪ್ರಶ್ನಿಸಿತ್ತು.ಪ್ರಸ್ತುತ ತುರ್ತು ಹಣದ ಅವಶ್ಯಕತೆಯಿದ್ದು, ಜಪ್ತಿ ಮಾಡಲಾದ ಹಣವನ್ನ ವಾಪಸ್ ನೀಡುವಂತೆ ಕೋರಿ 57ನೇ ಸೆಷನ್ಸ್ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ದರ್ಶನ್ ಹಾಗೂ ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಬೆನ್ನಲ್ಲೇ ಆಕ್ಷೇಪಣೆ ಸಲ್ಲಿಸುವಂತೆ ಎಸ್ಪಿಪಿಯವರಿಗೆ ನ್ಯಾಯಾಲಯ ಸೂಚಿಸಿದೆ. ಮತ್ತೊಂದೆಡೆ ಪೊಲೀಸರು ಜಪ್ತಿ ಮಾಡಿರುವ ಹಣದ ಕುರಿತು ತನಿಖೆಯ ಅಗತ್ಯವಿದ್ದು, ತಮ್ಮ ವಶಕ್ಕೆ ನೀಡುವಂತೆ ಆದಾಯ ತೆರೆಗೆ ಇಲಾಖೆ ಅರ್ಜಿ ಸಲ್ಲಿಸಿದೆ. ಆದಾಯ ತೆರಿಗೆ ಇಲಾಖೆಯ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ದರ್ಶನ್ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.


































