ಬೆಂಗಳೂರು: ಕಳೆದ ವರ್ಷದಂತೆ ಈ ಬಾರಿಯೂ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 42 ಡಿ.ಸೆ. ಉಷ್ಣಾಂಶ ದಾಟುವ ನಿರೀಕ್ಷೆ ಇದೆ. ತೇವಾಂಶ ಕೊರತೆ, ಶುಭ್ರ ಆಕಾಶ, ಒಣಗಾಳಿ ಬೀಸುವುದೂ ಸೇರಿ ವಿವಿಧ ಕಾರಣಗಳಿಂದ ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ 5-6 ಡಿ.ಸೆ.ಅಧಿಕ ಉಷ್ಣಾಂಶ ವರದಿಯಾಗಲಿದೆ. ಈ ಬಾರಿಯೂ ವಾಡಿಕೆಗಿಂತ ಮುನ್ನ ಅಂದರೆ ಪ್ರಸಕ್ತ ತಿಂಗಳ 2ನೇ ಅಥವಾ 3ನೇ ವಾರದಲ್ಲಿ ಬೇಸಿಗೆ ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಫೆಬ್ರವರಿಯಲ್ಲೇ ನಿಧಾನವಾಗಿ ಬಿಸಿಲು ಧಗೆ ಹೆಚ್ಚಳವಾಗುತ್ತಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಹೆಚ್ಚಳದಿಂದಾಗಿ ಬೆಳಗ್ಗೆ 8 ಗಂಟೆಯಿಂದಲೇ ನೆತ್ತಿ ಸುಡಲಾರಂಭಿಸಿದೆ. ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ಅಲೆ ಎಂದು ಕರೆಯಲಾಗುತ್ತಿದೆ. ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾದರೆ ಜನರಿಗೆ ಊತ, ತಲೆನೋವು, ವಾಕರಿಕೆ, ರ್ನಿಜಲೀಕರಣ, ಸುಸ್ತು, ವಾಂತಿ, ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆ ಕಾಡಲಿವೆ. ತಾಪಮಾನ ಹೆಚ್ಚಳಕ್ಕೆ ಕಾರಣವೇನು? * ಮಣ್ಣಿನಲ್ಲಿ ತೇವಾಂಶ ಕೊರತೆ * ಕೆರೆ, ಗುಂಟೆಗಳಲ್ಲಿ ನೀರು ಬರಿದಾಗುವುದು * ತೇವಾಂಶಭರಿತ ಮೋಡ ಇಲ್ಲದಿರುವುದು * ಅರಣ್ಯ ನಾಶ * ಪಳೆಯುಳಿಕೆ ಇಂಧನ ಸುಡುವುದು * ತಗ್ಗದ ಎಲ್&ನಿನೋ ಪ್ರಭಾವ * ಕರ್ನಾಟಕದ ಹೆಚ್ಚಿನ ಭಾಗಗಳು ಶುಷ್ಕ, ಅರೆ ಶುಷ್ಕ ಸ್ಥಿತಿ ಯಾರ್ಯಾರು ಎಚ್ಚರವಹಿಸಬೇಕು * ಮನೆ ಇಲ್ಲದೆ ಬೀದಿಯಲ್ಲಿ ಮಲಗುವ ನಿರಾಶ್ರಿತರು * ಆಟೋ ಚಾಲಕರು, ಸಂಚಾರ ಪೊಲೀಸರು * ರೈತರು, ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾರ್ಮಿಕರು * ಬಿಸಿಲಿನ ಪ್ರಖರತೆ ಇದ್ದಾಗ ವಯಸ್ಸಾದವರು ಹೊರಗಡೆ ಓಡಾಡಬಾರದು * ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೆಲಸ ಮಾಡಬಾರದು * ಹೊರಗಡೆ ತೆರಳುವಾಗ ಛತ್ರಿ, ನೀರಿನ ಬಾಟಲ್ ತೆಗೆದುಕೊಂಡು ಹೋಗಬೇಕು * ವಿಶೇಷವಾಗಿ ನಿರ್ಮಾಣ ಹಂತದ ಕಾಮಗಾರಿ ನಡೆಸಬಾರದು ಎಚ್ಚರಿಕೆ ಕ್ರಮಗಳೇನು? *ಹೆಚ್ಚು ನೀರು (ಕುದಿಸಿ ಆರಿಸಿದ) ಕುಡಿಯಬೇಕು * ಗಂಜಿ, ಮಜ್ಜಿಗೆ, ಎಳನೀರು, ನಿಂಬೆ ರಸದಂತಹ ತಂಪು ಪಾನೀಯ ಸೇವನೆ ಉತ್ತಮ * ತಾಜಾ ಹಣ್ಣು, ತರಕಾರಿ ಬಳಸಿ * ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸಿ * ಮಾಂಸ, ಮಸಾಲೆ ಪದಾರ್ಥಗಳ ಮಿತ ಬಳಕೆ * ಹೊರಗಿನ ಆಹಾರ ಮತ್ತು ಪಾನೀಯಗಳಿಂದ ದೂರವಿರಿ * ಮದ್ಯಪಾನ, ಧೂಮಪಾನ ಒಳ್ಳೆಯದಲ್ಲ * ಸುಡು ಬಿಸಿಲಿನಲ್ಲಿ ಓಡಾಡಬಾರದು ಉಷ್ಣಾಂಶ ದಾಖಲಾದ ವಿವರ ವರ್ಷ ತಾಪಮಾನ 2024 41.3 2022 39.7 2021 38.9 2019 39.9 2018 38.1 2017 39.6 ಸದ್ಯ ಸಿಲಿಕಾನ್ ಸಿಟಿಯಲ್ಲಿ ವಾಡಿಕೆಯಂತೆ 1-2 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ.
