ಚಂಡೀಗಢ : ಭಾರತ ಸೇನೆಯ ಆಪರೇಷನ್ ಸಿಂಧೂರದ ಬಗ್ಗೆ ಪಾಕಿಸ್ತಾನ ಸೇನೆ ಮತ್ತು ಐಎಸ್ಐಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಹರಿಯಾಣದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಸ್ತ್ಗಢ ಚೀಕಾ ಗ್ರಾಮದ ದೇವೇಂದ್ರ ಸಿಂಗ್ (25) ಬಂಧಿತ ಯುವಕ.
ವಿಚಾರಣೆಯ ಸಂದರ್ಭದಲ್ಲಿ ದೇವೇಂದ್ರ ಸಿಂಗ್ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕದಲ್ಲಿರುವುದಾಗಿ ಬಹಿರಂಗಪಡಿಸಿದ್ದಾನೆ. ದೇವೇಂದ್ರ ಸಿಂಗ್ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆಯೂ ಐಎಸ್ಐಗೆ ಆಗಾಗ ಮಾಹಿತಿ ರವಾನಿಸಿದ್ದಾನೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಕೈಥಲ್ ಜಿಲ್ಲಾ ಪೊಲೀಸರು ದೇವೇಂದ್ರ ಸಿಂಗ್ನನ್ನು ಬಂಧಿಸಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲಿ ದೇವೆಂದ್ರ ಸಿಂಗ್ ಬಳಿ ಪತ್ತೆಯಾದ ಸಾಧನಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್ಪಿ ಕೈಥಲ್ ವೀರಭನ್ ಮಾಹಿತಿ ನೀಡಿದ್ದಾರೆ.
ದೇವೇಂದ್ರ ಸಿಂಗ್ ಪಂಜಾಬ್ನ ಕಾಲೇಜೊಂದರಲ್ಲಿ ಎಂಎ ರಾಜ್ಯಶಾಸ್ತ್ರ ವಿದ್ಯಾರ್ಥಿಯಾಗಿದ್ದು, ಕಳೆದ ವರ್ಷ ನವೆಂಬರ್ನಲ್ಲಿ ಪಾಕಿಸ್ತಾನದ ನಂಕಾನಾ ಸಾಹಿಬ್ ಗುರುದ್ವಾರಕ್ಕೆ ತೀರ್ಥಯಾತ್ರೆಗೆಂದು ಹೋಗಿದ್ದ. ಈ ವೇಳೆ ಪಾಕಿಸ್ತಾನಿ ಗುಪ್ತಚರ ಏಜೆಂಟ್ಗಳು ಈತನೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಅಂದಿನಿಂದ ಪಾಕ್ ಐಎಸ್ಐಗೆ ದೇವೇಂದ್ರ ಸಿಂಗ್ ನಿರಂತರವಾಗಿ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ.