ಚೆನ್ನೈ: ಭಾರಿ ಮಳೆಯಿಂದಾಗಿ ನಗರದ ಟೈಡಲ್ ಪಾರ್ಕ್ ಬಳಿ ರಸ್ತೆ ಕುಸಿದು ಬೃಹತ್ ಗುಂಡಿಯಾಗಿದ್ದ ಕಾರಣ, ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕ್ಯಾಬ್ ಗುಂಡಿಗೆ ಉರುಳಿ ಭಾರಿ ಅವಘಡ ಸಂಭವಿಸಿದ ಘಟನೆ ನಡೆದಿದೆ.
ಶನಿವಾರ(ಮೇ.18) ಸಂಜೆ 6.30ಕ್ಕೆ ಒಳಚರಂಡಿ ಕೊಳವೆಯಲ್ಲಿ ಸೋರಿಕೆಯಾದ ಕಾರಣ ರಸ್ತೆ ಕುಸಿದು ಕಾರು ಗುಂಡಿಯೊಳಗೆ ಉರುಳಿದೆ ಎಂದು ಚೆನ್ನೈ ಮೆಟ್ರೋ ರೈಲು ತಿಳಿಸಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರು ಮತ್ತು ಮೆಟ್ರೋ ರೈಲು ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. ರಸ್ತೆ ಕುಸಿತದಿಂದಾಗಿ ರಾಜೀವ್ ಗಾಂಧಿ ಸಲೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಚೆನ್ನೈನ ಟೈಡಲ್ ಪಾರ್ಕ್ ಸಿಗ್ನಲ್ ಬಳಿ ರಸ್ತೆಯೊಂದು ಕುಸಿದು ಆಳವಾದ ಹೊಂಡ ಉಂಟಾಯಿತು. ಅದರಲ್ಲಿ ಐವರು ಪ್ರಯಾಣಿಕರಿದ್ದ ಟ್ಯಾಕ್ಸಿಯೊಂದು ಬಿದ್ದಿದೆ. ಟ್ಯಾಕ್ಸಿ ಚಾಲಕ ವಿಘ್ನೇಶ್ (40) ಶೋಲಿಂಗನಲ್ಲೂರಿನಿಂದ ಸಾಫ್ಟ್ವೇರ್ ಕಂಪನಿಯ ಉದ್ಯೋಗಿ ವಿಘ್ನೇಶ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಸೆಂಟ್ರಲ್ ರೈಲ್ವೆ ನಿಲ್ದಾಣದ ಕಡೆಗೆ ಹೋಗುತ್ತಿದ್ದರು. ಸಿಗ್ನಲ್ ಬಳಿ ಹೋಗುವಾಗ ರಸ್ತೆ ಇದ್ದಕ್ಕಿದ್ದಂತೆ ಕುಸಿದು ಟ್ಯಾಕ್ಸಿ ಹೊಂಡಕ್ಕೆ ಬಿದ್ದಿದೆ.
ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು ಮತ್ತು ಇತರ ವಾಹನ ಸವಾರರು ತಕ್ಷಣವೇ ರಕ್ಷಣೆಗೆ ಧಾವಿಸಿದರು. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಗುತ್ತಿಗೆದಾರರ ಸಹಾಯದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ತಕ್ಷಣವೇ ಪೊಲೀಸರು ರಸ್ತೆಯನ್ನು ಬಂದ್ ಮಾಡಿ ಟ್ರಾಫಿಕ್ ಅನ್ನು ಬೇರೆಡೆಗೆ ತಿರುಗಿಸಿದರು. ಇದರಿಂದ ರಾಜೀವ್ ಗಾಂಧಿ ಸಲೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಚೆನ್ನೈ ಮೆಟ್ರೋ ರೈಲು , ಮೆಟ್ರೋ ವಾಟರ್ ಮತ್ತು ಇತರ ಇಲಾಖೆಗಳ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. “ತಿರುವನ್ಮಿಯೂರು ಮತ್ತು ತಾರಾಮಣಿ ನಡುವೆ, ಮೆಟ್ರೋ ರೈಲು ನಿಲ್ದಾಣದಿಂದ ಸುಮಾರು 300 ಮೀಟರ್ ದೂರದಲ್ಲಿ ರಸ್ತೆ ಕುಸಿತ ಸಂಭವಿಸಿದೆ. 2.2 ಮೀಟರ್ ವ್ಯಾಸದ ಒಳಚರಂಡಿ ಕೊಳವೆಯಲ್ಲಿ ಸೋರಿಕೆಯಾದ ಕಾರಣ ಈ ಕುಸಿತ ಸಂಭವಿಸಿದೆ ಎಂದು ಶಂಕಿಸಲಾಗಿದೆ” ಎಂದು ಚೆನ್ನೈ ಮೆಟ್ರೋ ರೈಲು ನಿಗಮ ತಿಳಿಸಿದೆ.
CMRL ತನ್ನ ಗುತ್ತಿಗೆದಾರರೊಂದಿಗೆ ಸೇರಿ ಹೊಂಡದಲ್ಲಿ ಬಿದ್ದ ಕಾರನ್ನು ಹೊರತೆಗೆಯಲು ಅಗತ್ಯವಿರುವ ಯಂತ್ರೋಪಕರಣಗಳನ್ನು ಒದಗಿಸಿದೆ. ಸದ್ಯಕ್ಕೆ ರಸ್ತೆಯನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತಿದೆ. ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.