ಬೆಂಗಳೂರು : ಮದ್ಯದ ಅಮಲಿನಲ್ಲಿ ಸಿಗರೇಟ್ ಲೈಟರ್ಗಾಗಿ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳವು ವ್ಯಕ್ತಿಯೋರ್ವರ ಕೊಲೆಯಲ್ಲಿ ಅಂತ್ಯವಾಗಿದೆ.
ಇನ್ನು ಈ ಘಟನೆ ಆರಂಭದಲ್ಲಿ ಅಪಘಾತ ಎಂದು ಹೇಳಲಾಗಿತ್ತು. ಇದೀಗ ಕೊಲೆ ಎಂದು ತಿಳಿದುಬಂದಿದೆ. ಈ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಸಂದ್ರ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ವೀರಸಂದ್ರ ನಿವಾಸಿ ಪ್ರಶಾಂತ್ ಎಂ ಮೃತ ವ್ಯಕ್ತಿ. ಆರೋಪಿ ಉಡುಪಿಯ ಸಾಫ್ಟ್ವೇರ್ ಎಂಜಿನಿಯರ್ ಮತ್ತು ವಿಜ್ಞಾನ್ ನಗರದ ನಿವಾಸಿ ರೋಷನ್ ಹೆಗ್ಡೆ (36) ಅವರನ್ನು ಬಂಧಿಸಲಾಗಿದೆ.
ಭಾನುವಾರ ರಾತ್ರಿ 9.30 ರ ಸುಮಾರಿಗೆ ಕಮ್ಮಸಂದ್ರದ ಆಟದ ಮೈದಾನದಲ್ಲಿ ಐದು ಸ್ನೇಹಿತರ ಗುಂಪು ಸೇರಿ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಸಿಗರೇಟ್ ಲೈಟರ್ಗಾಗಿ ರೋಷನ್ ಮತ್ತು ಪ್ರಶಾಂತ್ ನಡುವೆ ಜಗಳ ನಡೆದಿದ್ದು, ಅದು ಉಲ್ಬಣಗೊಂಡು, ರೋಷನ್ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ, ನಾಲಿಗೆಗೆ ಗಾಯ ಮಾಡಿಕೊಂಡರು ಎಂದು ಆರೋಪಿಸಲಾಗಿದೆ. ಈ ಜಗಳದ ನಂತರ, ರೋಷನ್ ತನ್ನ ಎಸ್ಯುವಿಯಲ್ಲಿ ಸ್ಥಳದಿಂದ ಹೊರಹೋಗಲು ನಿರ್ಧರಿಸಿದರು. ಆದರೆ ಪ್ರಶಾಂತ್ ಹಿಂಬಾಲಿಸಿ ವಾಹನದ ಫುಟ್ಬೋರ್ಡ್ಗೆ ಹಾರಿ, ನಿಂದಿಸಿದ್ದರು.
ರೋಷನ್ ಸುಮಾರು 400 ಮೀಟರ್ಗಳಷ್ಟು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರು. ಈ ಸಮಯದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು, ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ನಂತರ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಎಸ್ಯುವಿಯ ಎಡಭಾಗದ ಕಿಟಕಿಗೆ ನೇತಾಡುತ್ತಿದ್ದ ಪ್ರಶಾಂತ್ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿ ರೋಷನ್ಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.

































