ಚಿತ್ರದುರ್ಗ: ನಗರಸಭೆ ಮುಂಭಾಗದಲ್ಲಿರುವ ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಕಟ್ಟಡದ ಪಕ್ಕದಲ್ಲಿರುವ ರಾಜ ಕಾಲುವೆ ಜಾಗವನ್ನು ಅತಿಕ್ರಮಿಸಿಕೊಂಡು ಪ್ರಸಾದಮ್ ಹೋಟೆಲ್ ಮಾಲೀಕರು ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಕಟ್ಟಡವನ್ನು ನಗರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಲು ಮುಂದಾದರು.
ನಗರಸಭೆ ಕಾರ್ಯಾಲಯದಿಂದ 2024 ರ ಜನವರಿ 10 ರಂದು ಅಭಿಯಂತರರ ಸ್ಥಳ ತನಿಖಾ ವರದಿ ನಂತರ ನಗರಸಭೆ ಕಚೇರಿಯಿಂದ ನೀಡಲಾದ ನೋಟೀಸ್ ಸಮ ಸಂಖ್ಯೆ ದಿನಾಂಕ:11-01-2024, 22-03-2024, 08-05-2024, 20-06-2024 ಮತ್ತು ನಗರಸಭೆ ಕಚೇರಿಯಿಂದ 20.06.2024 ರಂದು ನೀಡಲಾದ ತಾತ್ಕಾಲಿಕ ಆದೇಶವನ್ನು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಅವರು ಉಲ್ಲಂಘಿಸಿ ಅಧಿಕಾರ ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿ ಯೋಜನಾ ನಿರ್ದೇಶಕರು ಚಿತ್ರದುರ್ಗ ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ ರವರ ಆದೇಶದಂತೆ ನಗರಸಭೆ ಕಚೇರಿಯ ಅಧಿಕೃತ ಜ್ಞಾಪನಾ ಪತ್ರ ದಿನಾಂಕ:17-11-2025 ನಗರಸಭೆ ಆಯುಕ್ತರಾದ ಲಕ್ಷ್ಮಿ ಅವರು ಕಟ್ಟಡ ಮತ್ತು ಅನಧಿಕೃತ ಜಾಗ ತೆರವಿಗೆ ಆದೇಶ ಮಾಡಿದ್ದರು.
ಚಿತ್ರದುರ್ಗ ನಗರದ ಬಿ.ಡಿ.ರಸ್ತೆ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್ ಹತ್ತಿರದಲ್ಲಿನ ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಮಾಲಿಕತ್ವದ ನಿವೇಶನಗಳ ಮಧ್ಯೆ ನಗರಸಭೆಯ ರಾಜ ಕಾಲುವೆ ( ಮಳೆ ನೀರು ಚರಂಡಿ) ಹಾದು ಹೋಗಿದ್ದು, ಸದರಿ ಮಳೆ ನೀರು ಚರಂಡಿಯನ್ನು ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಮಾಲೀಕರು ಹಾಗೂ ಪ್ರಸಾದಂ ಹೋಟೇಲ್ ರವರು ಅತಿ ಕ್ರಮಿಸಿ ಎರಡು ಬದಿ ಅಡ್ಡವಾಗಿ ಶೀಟ್ ಹಾಗೂ ಗೋಡೆಯನ್ನು ನಿರ್ಮಿಸಿಕೊಂಡಿದ್ದರು.
ಈಗಾಗಲೇ ಪ್ರಸಾದಂ ಹೋಟೇಲ್ ಕಟ್ಟಡದ ಖಾತಾ ನಂ253/7568/6347 ಸ್ವತ್ತಿನ 1975-76 ನೇ 1990-91 ಮತ್ತು 1995-96 ನೇ ಸಾಲಿನಿಂದ ಪಸ್ತುತ ಸಾಲಿನವರಿಗಿನ ಖಾತಾ ಉತಾರ ಪಡೆಯಲಾಗಿದ್ದು, ಭಾರತ್ ಸೈಟ್ಸ್ ಗೈಡ್ಸ್ ಮಾಲೀಕತ್ವದ ಕಟ್ಟಡದ ಸ್ವತ್ತಿನ ಪೈಕಿ (ಪ್ರಸಾದಂ ಹೋಟೇಲ್) ಖಾತಾ ನಂ253/7568/6347 ಸ್ವತ್ತಿನ ಅಳತೆ ಹಾಗೂ ಅರಮನೆ ಸ್ವೀಟ್ಸ್ ಅಂಗಡಿ ಹಾಗೂ ಪಿ ಎಲ್ ಡಿ ಬ್ಯಾಂಕ್ಗಳ ಕಟ್ಟಡ ಅಳತೆಗಳನ್ನು ಕಚೇರಿಯಲ್ಲಿ ಲಭ್ಯವಿರುವಂತೆ ಕಂದಾಯ ಶಾಖೆಯ ವರದಿಯಂತೆ ಸ್ಥಳ ಪರಿಶೀಲಿಸಲಾಗಿ ಅಳತೆಯನ್ನು ಮಾಡಿ ತಾಂತ್ರಿಕ ಶಾಖೆಯವರು ಲಿಖಿತವಾಗಿ ವರದಿಯನ್ನು ಸಲ್ಲಿಸಿರುತ್ತಾರೆ.
ಪ್ರಯುಕ್ತ ಸದರಿ ಮಳೆ ನೀರು ಚರಂಡಿಯನ್ನು ಅತಿ ಕ್ರಮಿಸಿ ಎರಡು ಬದಿ ಅಡ್ಡವಾಗಿ ಶೀಟ್ ಹಾಗೂ ಗೋಡೆಯನ್ನು ನಿರ್ಮಿಸಿರುವುದು ಅಭಿಯಂತರರ ಸ್ಥಳ ತನಿಖಾ ವರದಿಯಿಂದ ತಿಳಿದುಬಂದಿರುತ್ತದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಯುಕ್ತ ಮೇಲ್ಕಂಡಂತೆ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ಜಾಗವನ್ನು ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ನಿಯಮ 187(9)(ಕ)ರ ಪ್ರಕಾರ ತೆರವುಗೊಳಿಸಿ, 3 ದಿನದೊಳಗಾಗಿ ಛಾಯಾಚಿತ್ರದೊಂದಿಗೆ ಈ ಮೇಲೆ ಸಹಿ ಮಾಡಿರುವ ಅಧಿಕಾರಿಗೆ ಲಿಖಿತ ವರದಿಯನ್ನು ನೀಡತಕ್ಕದ್ದು. ತಪ್ಪಿದ್ದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದು ತಿಳಿಯುವುದು ಎಂದು ನಗರಸಭೆ ಪೌರಾಯುಕ್ತರಾದ ಲಕ್ಷ್ಮಿ ಅವರು ಆದೇಶ ಮಾಡಿದ್ದಾರೆ.
































