ಗ್ಯಾಸ್ ಪೂರೈಕೆಯಲ್ಲಿ ಕೊರತೆ ಇಲ್ಲ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ

WhatsApp
Telegram
Facebook
Twitter
LinkedIn

 

ದಾವಣಗೆರೆ:  ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಗ್ಯಾಸ್ ಪೆಟ್ರೂಲ್‌ ಮತ್ತು ಡಿಸೇಲ್‌ ಕೊರತೆಯಾಗಲಿದೆ ಎಂಬ ವದಂತಿಗಳು ಹರಡುತ್ತಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಮತ್ತು ಅನಗತ್ಯವಾಗಿ ಬುಕಿಂಗ್‌  ಮಾಡಬಾರದು, ಅಗತ್ಯವಿರುವಷ್ಟು ಗ್ಯಾಸ್‌ ಸಿಲಿಂಡರ್‌ ಲಭ್ಯವಿದೆ  ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ಸಾರ್ವಜನಿಕರಲ್ಲಿ  ಮನವಿ ಮಾಡಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಘೋಷ್ಠಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 9,427 ಸಿಲಿಂಡರ್‌ಗಳು ವಿತರಣೆಯಾಗುತ್ತಿವೆ. ವಾರಕ್ಕೆ ಮೊದಲು ಬುಕಿಂಗ್ ಸಂಖ್ಯೆ ಸಾಮಾನ್ಯವಾಗಿದ್ದರೂ, ವದಂತಿಗಳ ನಂತರ ಇದು ಐದು ಪಟ್ಟು ಹೆಚ್ಚಾಗಿ 46,355 ಕ್ಕೆ ಏರಿದೆ. ಇದು ಕೇವಲ ಜನರ ಆತಂಕದಿಂದ ಸೃಷ್ಟಿಯಾಗಿರುವ ಸಮಸ್ಯೆಯೇ ಹೊರತು ಗ್ಯಾಸ್ ಕೊರತೆಯಿಂದಲ್ಲ ಎಂದು ತಿಳಿಸಿದರು.

ಮುಂದಿನ 4-5 ದಿನಗಳಲ್ಲಿ ಎಲ್ಲಾ ಗ್ಯಾಸ್‌ ಸಿಲಿಂಡರ್‌ ಬುಕಿಂಗ್‌ಗಳನ್ನು ಸರಬರಾಜು  ಮಾಡಲಾಗುವುದು ಮತ್ತು ಗ್ಯಾಸ್ ಏಜೆನ್ಸಿಗಳ ಮುಂದೆ ಅನಗತ್ಯವಾಗಿ ಸಾಲು ನಿಲ್ಲುವ ಅವಶ್ಯಕತೆಯಿಲ್ಲ, ಒಂದು ವೇಳೆ ಯಾರಾದರು ಗ್ಯಾಸ್‌ ಏಜೆನ್ಸಿಗಳ ಮುಂದೆ ಸಾಲು ನಿಂತು ಜನರಲ್ಲಿ ಆತಂಕ ಸೃಷ್ಠಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಸುಳ್ಳು ಸುದ್ದಿ ಹಬ್ಬಿಸುವುದು ಮಾಡಿದರೆ  ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಡುಗೆ ಅನಿಲ (LPG) ಲಭ್ಯತೆ: ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ. ಬುಕಿಂಗ್ ಮಾಡಿದ ಆರು ದಿನಗಳೊಳಗೆ ಸಿಲಿಂಡರ್ ಪೂರೈಕೆಯಾಗಲಿದೆ. ವಾಣಿಜ್ಯ ಸಿಲಿಂಡರ್ ಮೇಲಿದ್ದ ನಿರ್ಬಂಧವನ್ನೂ ಸರ್ಕಾರ ತೆಗೆದುಹಾಕಿದ್ದು, ಈಗ ಸುಲಭವಾಗಿ ಲಭ್ಯವಿದೆ.

ಹೊಸ ಬುಕಿಂಗ್ ನಿಯಮಗಳು:- ಸರ್ಕಾರವು ಸಿಲಿಂಡರ್ ಬುಕಿಂಗ್‌ಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ:

14.2 ಕೆ.ಜಿ ಗೃಹ ಬಳಕೆ ಸಿಲಿಂಡರ್: ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರು: 25 ದಿನಕ್ಕೊಮ್ಮೆ ಬುಕ್ ಮಾಡಬಹುದು. ಎರಡು ಸಿಲಿಂಡರ್ ಹೊಂದಿರುವವರು: 35 ದಿನಕ್ಕೊಮ್ಮೆ ಬುಕಿಂಗ್ ಮಾಡಲು ಅವಕಾಶವಿದೆ.

5 ಕೆಜಿ ಗೃಹ ಬಳಕೆ ಸಿಲಿಂಡರ್: ನಗರ ಪ್ರದೇಶದಲ್ಲಿ 9 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 16 ದಿನಕ್ಕೊಮ್ಮೆ ಅವಕಾಶ. 10 ಕೆಜಿ ಕಂಪೋಸಿಟ್ ಸಿಲಿಂಡರ್ : ನಗರ ಪ್ರದೇಶದಲ್ಲಿ 18 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 32 ದಿನಕ್ಕೊಮ್ಮೆ ಬುಕ್ ಮಾಡಬಹುದು.

ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆ: ಜಿಲ್ಲೆಯ 220ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ದಾಸ್ತಾನು ಪೂರಕವಾಗಿದೆ. ವದಂತಿಗಳಿಂದಾಗಿ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲು ನಿಲ್ಲುತ್ತಿರುವುದು ಕಂಡುಬಂದಿದ್ದು, ಇಂಧನ ಖಾಲಿಯಾಗುವ ಯಾವುದೇ ಭೀತಿ ಇಲ್ಲ, ಇನ್ನು ಐದು ತಿಂಗಳಿಗೆ ಆಗುವಷ್ಟು ಇಂಧನ ದಾಸ್ತಾನು ಇರುವುದಾಗಿ ತಿಳಿಸಿದರು.

ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣು: ಎಫ್‌ಐಆರ್ ಎಚ್ಚರಿಕೆ :ಸಮಾಜದಲ್ಲಿ ಅಶಾಂತಿ ಮತ್ತು ಅಭದ್ರತೆ ಮೂಡಿಸುವ ನಿಟ್ಟಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. “ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಎಫ್‌ಐಆರ್ (FIR) ದಾಖಲಿಸಲಾಗುವುದು. ಪ್ರತಿಯೊಂದು ಪೋಸ್ಟ್ ಮೇಲೆ ನಮ್ಮ ಸೋಷಿಯಲ್ ಮೀಡಿಯಾ ವಿಂಗ್ ಕಣ್ಣಿಟ್ಟಿದೆ”,  ದೇಶದಾದ್ಯಂತ ಇಂದೇ ಆಮದು ನಿಂತರೂ ಸಹ ಮುಂದಿನ ನಾಲ್ಕರಿಂದ ಐದು ತಿಂಗಳವರೆಗೆ ಇಂಧನ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಪ್ರಧಾನ ಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.

ಬಂಕ್‌ಗಳಿಗೆ ಸೂಚನೆ: ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾನು ಅಥವಾ ಟ್ಯಾಂಕ್‌ಗಳ ಮೂಲಕ ಅನಗತ್ಯವಾಗಿ ಇಂಧನ ಮಾರಾಟ ಮಾಡದಂತೆ ನಿರ್ದೇಶನ ನೀಡಲಾಗಿದೆ. ಜನರು ಆತಂಕದಿಂದ ಇಂಧನ ತುಂಬಿಸಿಕೊಳ್ಳುವ ಅಗತ್ಯವಿಲ್ಲ. ಸಾರ್ವಜನಿಕರು ಕೇವಲ ಸರ್ಕಾರ ಮತ್ತು ತೈಲ ಕಂಪನಿಗಳ (BPCL, HPCL, IOCL) ಅಧಿಕೃತ ಹೇಳಿಕೆಗಳನ್ನು ಮಾತ್ರ ನಂಬಬೇಕು. ಸುಖಾಸುಮ್ಮನೆ ಆತಂಕಕ್ಕೆ ಒಳಗಾಗಿ ಇಂಧನ ಸಂಗ್ರಹ ಮಾಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಬೈಯೋ ಗ್ಯಾಸ್‌ ಬಳಸಿ :                                         ಸಾರ್ವಜನಿಕರು ಅಡುಗೆ ಅನಿಲದ ಬಳಕೆಯನ್ನು ಮಿತವಾಗಿ ಬಳಸಬೇಕು ಹಾಗೂ ಪರ್ಯಾಯ ಇಂಧನವಾಗಿ ಜೈವಿಕ ಅನಿಲ (ಬೈಯೋ ಗ್ಯಾಸ್) ಬಳಕೆಗೆ ಹೆಚ್ಚಿನ ಒತ್ತು ನೀಡಬೇ̧ಕು ಇತ್ತೀಚಿನ ದಿನಗಳಲ್ಲಿ ಇಂಧನದ ಬಳಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಸಿಲಿಂಡರ್ ಗ್ಯಾಸ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವಾವಲಂಬಿಗಳಾಗಲು ಬೈಯೋ ಗ್ಯಾಸ್ ಘಟಕಗಳನ್ನು ಸ್ಥಾಪಿಸಿಕೊಳ್ಳುವುದು ಸೂಕ್ತವಾಗಿದೆ. ಈ ಮೂಲಕ ಪರಿಸರ ಸಂರಕ್ಷಣೆಯ ಜೊತೆಗೆ ಆರ್ಥಿಕ ಉಳಿತಾಯವನ್ನೂ ಮಾಡಬಹುದು. ಜೈವಿಕ ಅನಿಲ ಘಟಕಗಳನ್ನು ಅಳವಡಿಸಿಕೊಳ್ಳುವ ಆಸಕ್ತ ಗ್ರಾಹಕರಿಗೆ ಸರ್ಕಾರದ ವತಿಯಿಂದ ನಿಯಮಾನುಸಾರ ಸಹಾಯಧನ ಸೌಲಭ್ಯವೂ ಲಭ್ಯವಿರಲಿದೆ. ಇದರಿಂದ ಗ್ರಾಹಕರಿಗೆ ಆರಂಭಿಕ ವೆಚ್ಚದ ಹೊರೆ ತಗ್ಗಲಿದ್ದು, ದೀರ್ಘಕಾಲದವರೆಗೆ ಉಚಿತವಾಗಿ ಇಂಧನ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶೇಖರ್‌ ಹೆಚ್.ಟಿ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಕಾಧಿಕಾರಿ ಗಿತ್ತೆ ಮಾಧವ ವಿಠಲರಾವ್‌, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್‌, ಇಂಧನ ಪೂರೈಕೆ ಕಂಪನಿಗಳ ನೊಡೆಲ್‌ ಅಧಿಕಾರಿಗಳು ಉಪಸ್ಥಿತರಿದ್ದರು.

 

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon