ಬಿಜೆಪಿ ಮೈತ್ರಿ ಅಣ್ಣಾಮಲೈಗೆ ಮುಳ್ಳಾಯ್ತೇ? ಅಣ್ಣಾಮಲೈ ರಾಜೀನಾಮೆ ಸಾಧ್ಯತೆ ದಟ್ಟವಾದ ಬೆನ್ನಲ್ಲೇ, ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡರು!

WhatsApp
Telegram
Facebook
Twitter
LinkedIn

ಚೆನ್ನೈ: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ರಾಜ್ಯದಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಹಗಲಿರುಳು ದುಡಿಯುತ್ತಿದ್ದಾರೆ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಅವರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣ, ಎಐಎಡಿಎಂಕೆ ಜೊತೆಗಿನ ಬಿಜೆಪಿ ಮೈತ್ರಿ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಸಾಧ್ಯತೆ ಚಿಗುರೊಡೆದಿದೆ. ಆದರೆ ಎಐಎಡಿಎಂಕೆ ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೋಡಲು ಇಷ್ಟಪಡದಿರುವುದು, ಅವರ ಕುರ್ಚಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

2023ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ ಕಾರಣ ಎಂಬುದು ಎಐಎಡಿಎಂಕೆ ಪಕ್ಷದ ಅಸಮಾಧಾನಕ್ಕೆ ಪ್ರಮುಖ ಕಾರಣ. ಅಲ್ಲದೇ ಜಾತಿ ಸಮೀಕರಣಗಳ ಕಾರಣದಿಂದಲೂ ಅಣ್ಣಾಮಲೈ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುವ ಸಾಧ್ಯತೆಗಳಿವೆ.

2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದರೆ, ಎರಡೂ ಪಕ್ಷಗಳ ಮುಖಂಡರು ಒಂದೇ ಸಮುದಾಯದವರಾಗಿರಬಾರದು ಎಂಬುದು ಉಭಯ ಪಕ್ಷಗಳ ಲೆಕ್ಕಾಚಾರವಾಗಿದೆ. ಅಣ್ಣಾಮಲೈ ಮತ್ತು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಇಬ್ಬರೂ ಪ್ರಬಲ ಹಿಂದುಳಿದ ಗೌಂಡರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಲ್ಲದೇ ಇಬ್ಬರೂ ಒಂದೇ ಪಶ್ಚಿಮ ಕೊಂಗು ಪ್ರದೇಶದವರಾಗಿರುವುದು, ಜಾತಿ ಮತ್ತು ಪ್ರದೇಶ ಸಮೀಕರಣದ ಲೆಕ್ಕಾಚಾರಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ.

ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾದ ಸಂದರ್ಭದಲ್ಲಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಪಕ್ಷದ ತಂತ್ರವನ್ನು ಅನುಸರಿಸುವಂತೆ ಅಮಿತ್ ಶಾ ಅವರು ಅಣ್ಣಾಮಲೈ ಅವರಿಗೆ ಸೂಚನೆ ನೀಡಿದ್ದು, ಇದರ ಅನುಸಾರವಾಗಿ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ಅಣ್ಣಾಮಲೈ ಅವರ ಸೇವೆಯನ್ನು ಕಳೆದುಕೊಳ್ಳಲು ಇಷ್ಟಪಡದ ಬಿಜೆಪಿ, ಅವರಿಗೆ ರಾಷ್ಟ್ರೀಯ ಜವಾಬ್ದಾರಿ ಅಥವಾ ಅನ್ಯ ರಾಜ್ಯಗಳ ಉಸ್ತುವಾರಿ ಜವಾಬ್ದಾರಿಯನ್ನು ನೀಡಲು ತೀರ್ಮಾನ ಮಾಡಿದಂತಿದೆ. ಅಣ್ಣಾಮಲೈ ಅವರ ಬದಲಿಗೆ ಬಿಜೆಪಿ ಶಾಸಕ ನೈನಾರ್ ನಾಗೇಂದ್ರನ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಮೂಲಕ, ಜಾತಿ ಸಮೀಕರಣವನ್ನು ಬಲಗೊಳಿಸುವ ಇರಾದೆ ಬಿಜೆಪಿಯದ್ದಾಗಿದೆ.

ಈ ಹಿಂದೆ ಎಐಎಡಿಎಂಕೆ ಪಕ್ಷದಲ್ಲಿದ್ದ ನೈನಾರ್ ನಾಗೇಂದ್ರನ್, ತಮಿಳುನಾಡಿನ ಪ್ರಭಾವಿ ದೇವರ್ ಸಮುದಾಯಕ್ಕೆ ಸೇರಿದವರು. ಅಲ್ಲದೇ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದರಿಂದ, ದಕ್ಷಿಣದಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂದೂ ಬಿಜೆಪಿ ಎಣಿಸಿದೆ. ಅಣ್ಣಾಮಲೈ ಅವರ ನಿರ್ಗಮನವು ಹಿಂಬಡ್ತಿಯಲ್ಲ ಎಂದು ಹೇಳಿರುವ ತಮಿಳುನಾಡು ಬಿಜೆಪಿ ನಾಯಕರು, ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ಮಾಡಿಕೊಂಡಿರುವ ಮರು ಹೊಂದಾಣಿಕೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.

“ಅಣ್ಣಾಮಲೈ ಅವರ ಬದಲಾವಣೆಯನ್ನು ಹಿಂಬಡ್ತಿ ಎಂದು ಪರಿಗಣಿಸಬಾರದು. ಇದು ಪಕ್ಷದ ಕಾರ್ಯತಂತ್ರದ ಭಾಗವಾಗಿದೆ” ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಪಶ್ಚಿಮ ತಮಿಳುನಾಡಿನಲ್ಲಿ ಬಿಜೆಪಿ ತನ್ನ ಹಿಡಿತವನ್ನು ಬಲ ಪಡಿಸಲು ಬಯಸಿದೆ.

ಈ ಎಲ್ಲಾ ಬೆಳವಣಿಗೆಗಳ ಕುರಿತು ಕೊಯಮತ್ತೂರಿನಲ್ಲಿ ಮಾತನಾಡಿದ ಅಣ್ಣಾಮಲೈ, ಅಮಿತ್ ಶಾ ಅವರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. “ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೈಕಮಾಂಡ್‌ಗೆ ವರದಿಯನ್ನು ಸಲ್ಲಿಸಿದ್ದೇನೆ. ರಾಜ್ಯದ ಪರಿಸ್ಥಿತಿ ಮತ್ತು ಮುಂದಿನ ಕಾರ್ಯತಂತ್ರದ ಬಗ್ಗೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ..” ಎಂದು ಅಣ್ಣಾಮಲೈ ಹೇಳಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon