ಬೆಂಗಳೂರು : ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಹೆಸರಲ್ಲಿ ವಂಚನೆ ಆರಂಭವಾಗಿದೆ. ಒಬ್ಬ ಯುವಕ 64 ಸಾವಿರ ರೂ. ಕಳೆದುಕೊಂಡಿರುವ ದುರದೃಷ್ಟಕರ ಘಟನೆ ಬೆಂಗಳೂರಿನ ಜ್ಞಾನಭಾರತಿ ಪ್ರದೇಶದಲ್ಲಿ ನಡೆದಿದೆ.
ಕುಂಭಮೇಳದ ಪ್ರಯಾಣದ ವೆಚ್ಚ ಕಡಿಮೆ ಮಾಡುವ ಲಾಭದಾಯಕ ಪ್ಯಾಕೇಜ್ಗಳನ್ನು ನೀಡುವಂತೆ ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಜ್ಞಾನಭಾರತಿ ನಿವಾಸಿಯೊಬ್ಬರು ತನ್ನ ಪ್ರಯಾಗ್ರಾಜ್ ಪ್ರಯಾಣದ ಬಗ್ಗೆ ಗೂಗಲ್ನಲ್ಲಿ ಹುಡುಕಿದ ನಂತರ, ಇತ್ತೀಚೆಗೆ ವ್ಯಕ್ತಿಯೊಬ್ಬನಿಂದ ಕರೆ ಬಂದಿದ್ದು, “ನಾನು ರಾಕೇಶ್ ಟೂರ್ಸ್ & ಟ್ರಾವೆಲ್ನಿಂದ ಮಾತನಾಡುತ್ತಿದ್ದೇನೆ” ಎಂದು ಪರಿಚಯಿಸಿದ್ದ. ಈ ಸಮಯದಲ್ಲಿ, ಆ ವ್ಯಕ್ತಿ ಕಡಿಮೆ ಬೆಲೆಯ ಪ್ಯಾಕೇಜ್ಗಾಗಿ ಹೇಳಿದ ಅಕೌಂಟ್ಗೆ ಹಂತ ಹಂತವಾಗಿ 64 ಸಾವಿರ ರೂ. ಠೇವಣಿ ಹಾಕುವಂತೆ ಮಾಡಿ ಹಣ ಪಡೆದುಕೊಂಡಿದ್ದ. ಹಣವನ್ನು ಪಡೆದ ನಂತರ, ಮುಂದಿನ ಬಾರಿ ಆ ವ್ಯಕ್ತಿಗೆ ಕರೆ ಮಾಡಿದಾಗ, ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಮೋಸ ಹೋಗಿರುವುದನ್ನು ಅರಿತ ತಕ್ಷಣ ಮೋಸ ಹೋದ ವ್ಯಕ್ತಿ 1930 ಗೆ ಕರೆ ಮಾಡಿ ದೂರು ನೀಡಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ, ಸೈಬರ್ ವಂಚಕರು ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕೂಡ ಇದೇ ರೀತಿಯ ವಂಚನೆ ಪ್ರಕರಣಗಳು ವರದಿಯಾಗಿವೆ.