ಶ್ರೀನಗರ: “ಉಗ್ರರು ಬಂದು ನನ್ನ ಅಪ್ಪನ ಮುಂದೆ ನಿಂತು, ಇಸ್ಲಾಮಿಕ್ ಶ್ಲೋಕ ಹೇಳುವಂತೆ ಸೂಚಿಸಿದರು. ಅವರು, ಗೊತ್ತಿಲ್ಲ ಎಂದಾಗ ಅವರ ತಲೆಗೆ ಗುಂಡಿಕ್ಕಿದರು’ ಎಂದು ತಂದೆಯನ್ನು ಕಳೆದುಕೊಂಡ ಅಸಾವರಿ ಕಣ್ಣೀರಿಗಾಗಿದ್ದಾಳೆ.
ಸಂತೋಷ್ ಜಗದಾಳೆ (54) ಉಗ್ರರ ಗುಂಡಿಗೆ ಬಲಿಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.ನನ್ನ ಅಪ್ಪ-ಅಮ್ಮ ಸೇರಿದಂತೆ ನಾವು 5 ಮಂದಿ ಬಂದಿದ್ದೆವು. ಕಣಿವೆಯ ಮೇಲ್ಭಾಗದಿಂದ ಸ್ಥಳೀಯರಂತೆ ಕಂಡುಬಂದ ಒಂದು ಗುಂಪು ಏಕಾಏಕಿ ಗುಂಡಿನ ದಾಳಿ ನಡೆಸುತ್ತಾ ಕೆಳಗಿಳಿದು ಬರುತ್ತಿತ್ತು. ಅದನ್ನು ನೋಡುತ್ತಲೇ ನಾವು ಭಯಭೀತರಾಗಿ ಒಂದು ಟೆಂಟ್ನೊಳಗೆ ಅಡಗಿಕೊಂಡೆವು. ನಾವು ಇದು ಉಗ್ರರು ಮತ್ತು ಯೋಧರ ನಡುವಿನ ಗುಂಡಿನ ಚಕಮಕಿ ಇರಬಹುದೆಂದು ಭಾವಿಸಿದ್ದೆವು.
ಆದರೆ, ಸತ್ಯ ಏನೆಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ನಮ್ಮ ಬಳಿ ಬಂದ ಉಗ್ರರು, “ಚೌಧರಿ ತೂ ಬಾಹರ್ ಆ ಜಾ’ ಎಂದರು. ಆಗ ಅಪ್ಪ ಟೆಂಟ್ನಿಂದ ಹೊರಗೆ ಬಂದರು. ಆಗ, ಇಸ್ಲಾಮಿಕ್ ಶ್ಲೋಕ (ಕಲಿಮಾ) ಹೇಳುವಂತೆ ಸೂಚಿಸಿದರು. ಗೊತ್ತಿಲ್ಲ ಎಂದೊಡನೆ ಅಪ್ಪನ ತಲೆ, ಕಿವಿ ಮತ್ತು ಬೆನ್ನಿಗೆ ಮೂರು ಗುಂಡು ಹಾರಿಸಿದರು. ನಂತರ ಅಲ್ಲೇ ಇದ್ದ ನನ್ನ ಅಂಕಲ್ಗೂ ಗುಂಡು ಹಾರಿಸಿದರು ಎಂದು ಅಸಾವರಿ ಹೇಳಿದ್ದಾರೆ.
ಕುದುರೆಗಳಲ್ಲೇ ಗಾಯ ಆದವರ ಹೊತ್ತುತಂದರು ದಾಳಿ ನಡೆದ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇನಾಪಡೆಗಳು ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಅಗತ್ಯವಿರುವ ಆಯಂಬುಲೆನ್ಸ್ ಸೇರಿದಂತೆ ಎಲ್ಲಾ ಸೇವೆಗಳನ್ನು ಒದಗಿಸಲಾಗಿದೆ.
ಬೈಸರನ್ ಪ್ರದೇಶಕ್ಕೆ ವಾಹನಗಳ ಸಂಪರ್ಕ ಇಲ್ಲ. ಇಲ್ಲಿಗೆ ಪ್ರವಾಸಿಗರು ಕೂಡ ಕಾಲ್ನಡಿಗೆ ಹಾಗೂ ಕುದುರೆಗಳ ಮೂಲಕವೇ ತೆರಳಬೇಕು. ದಾಳಿಯ ಬಳಿಕ ಹುಲ್ಲುಗಾವಲಿಗೆ ಹೆಲಿಕಾಪ್ಟರ್ಗಳು ತಲುಪುವ ಮೊದಲೇ ಸ್ಥಳೀಯರು ತಮ್ಮ ಕುದುರೆಗಳ ಮೇಲೆ ಗಾಯಾಳುಗಳನ್ನು ಹೊತ್ತು ತಂದಿದ್ದಾರೆ.