ಚಿತ್ರದುರ್ಗ : ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಬೆಳೆ ನಷ್ಟ ಪರಿಹಾರ ಸಹಾಯ ಧನ ಹೆಚ್ಚಿಸುವಂತೆ ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಡಾ.ಸಿ.ಶಿವಲಿಂಗಪ್ಪ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿತ್ತನೆ ಪೂರ್ವ ಯೋಜನೆ ಶೇ.75 ರಷ್ಟು ಬಿತ್ತನೆ ವೈಫಲ್ಯವಾದಾಗ ಮುಖ್ಯ ಬೆಳೆ ಮತ್ತು ಇನ್ನಿತರೆ ಬೆಳೆ ಎಂದು ಪ್ರತ್ಯೇಕಿಸದೆ ಎಲ್ಲಾ ಬೆಳೆ ವಿಮೆದಾರರಿಗೆ ಬೆಳೆ ವಿಮೆ ಬಿತ್ತನೆ ಪೂರ್ವ ಕಾಲ ಯೋಜನೆ ಅನ್ವಯವಾಗಬೇಕು. ಮುಖ್ಯ ಬೆಳೆಗೆ ಮಾತ್ರ
ಗ್ರಾಮ ಪಂಚಾಯಿತಿ ಮಟ್ಟದ ಬೆಳೆ ಕಟಾವು ಪ್ರಯೋಗ ಮಾಡುವ ಅಧಿಸೂಚಿತ ಮುಖ್ಯ ಬೆಳೆ ಎಂದು ಪರಿಗಣಿಸದೆ ಹೋಬಳಿ ಮಟ್ಟದ ಅಧಿಸೂಚಿತ ಬೆಳೆಗೆ ಬಿತ್ತನೆ ಪೂರ್ವ ಯೋಜನೆ ಅನ್ವಯವಾಗಬೇಕು. ಬೆಳೆ ಕಟಾವು ಸಮೀಕ್ಷೆಗೆ ಜಮೀನುಗಳ ಆಯ್ಕೆ ಸಮಯದಲ್ಲಿ ನೀರಾವರಿ ಅಕ್ಕಪಕ್ಕದ ಜಮೀನುಗಳನ್ನು ಆಯ್ಕೆ ಮಾಡಬಾರದು. ಏಕೆಂದರೆ ಮಳೆಯಾಶ್ರಿತ ಜಮೀನನ್ನು ನಡುವಿನ ಜಮೀನು ಆಯ್ಕೆ ಮಾಡುವ ಮೂಲಕ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬೆಳೆ ಇಳುವರಿ ಅರ್ಹತೆ ನಿಗಧಿಪಡಿಸುವಾಗ ಹಾಲಿ ವರ್ಷದ ಬೆಳೆ ಇಳುವರಿ ಪರಿಗಣಿಸಬೇಕು. ಹಿಂದಿನ ಐದು ವರ್ಷಗಳ ಸರಾಸರಿ ಇಳುವರಿ ಜೊತೆ ಹಾಲಿ ವರ್ಷದ ಇಳುವರಿ ನಿಗಧಿ ಮಾಡಬಾರದು. ಜಿಲ್ಲೆಯಲ್ಲಿ ಜೂ.10 ರಿಂದ ಜು.20 ರವರೆಗೆ ಸತತವಾಗಿ ಆರು ವಾರಗಳ ಕಾಲ ಮಳೆ ಅಭಾವದಿಂದ ತೀವ್ರತರವಾದ ಭೀಕರ ಬರಗಾಲ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೆ ಶೇ.15 ರಿಂದ 20 ರಷ್ಟು ಮಾತ್ರ ಬಿತ್ತನೆಯಾಗಿರುವ ಮಳೆಯಾಶ್ರಿತ ವಿವಿಧ ಬೆಳೆಗಳು ತೇವಾಂಶ ಕೊರತೆಯಿಂದ ಒಣಗಿ ನಾಶವಾಗುವ ಸ್ಥಿತಿಗೆ ತಲುಪಿದೆ. ಪ್ರಧಾನ ಮಂತ್ರಿ ಫಸಲ್ಬೀಮಾ ಯೋಜನೆಯಡಿ ಬೆಳೆ ನಷ್ಟವಾದಾಗ ಸುರಕ್ಷತೆ ಒದಗಿಸುವ ಬಿತ್ತನೆ ಪೂರ್ವ ಕಾಲ, ಬೆಳೆ ಕುಂಠಿತ ಮಧ್ಯಂತರ ಪರಿಹಾರ, ಇಳುವರಿ ನಷ್ಟ ಪರಿಹಾರ ನೀಡುವ ಮೂರು ಯೋಜನೆಗಳಿವೆ. ಇದರಲ್ಲಿ ಬೆಳೆ ಕುಂಠಿತ ಮಧ್ಯಂತರ ಪರಿಹಾರ ಮತ್ತು ಇಳುವರಿ ನಷ್ಟ ಪರಿಹಾರದ ಯೋಜನೆಗಳಲ್ಲಿ ಗ್ರಾಂ ಪಂ. ಮತ್ತು ಹೋಬಳಿ ಮಟ್ಟದ ಅಧಿಸೂಚಿತ ಬೆಳೆಗಳಲ್ಲಿ ತಾರತಮ್ಯವಿಲ್ಲ. ಆದರೆ ಬಿತ್ತನೆ ಪೂರ್ವ ಕಾಲ ಯೋಜನೆಯಲ್ಲಿ ಮಾತ್ರ ಮುಖ್ಯ ಬೆಳೆ ಹಾಗೂ ಇನ್ನಿತರೆ ಬೆಳೆಗಳೆಂದು ವಿಭಜಿಸುವ ಮೂಲಕ ರೈತರನ್ನು ವಂಚಿಸುವ ದೊಡ್ಡ ಹುನ್ನಾರವಿದೆ ಎಂದು ಡಾ.ಸಿ.ಶಿವಲಿಂಗಪ್ಪ ದೂರಿದರು.
ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಂ.ಕರಿಯಪ್ಪ, ಕಾರ್ಯದರ್ಶಿ ಎಸ್.ಪ್ರಕಾಶ್ ಒಡೆಯರ್, ಸಹ ಕಾರ್ಯದರ್ಶಿ ಡಾ.ಆರ್.ಎ.ದಯಾನಂದಮೂರ್ತಿ, ಜಿ.ಪಿ.ತಿಮ್ಮೇಗೌಡ, ಜಿ.ಎಂ.ಸಂದೀಪ್ ಕೋಡಿಹಳ್ಳಿ, ಪ್ರೊ.ಎಂ.ಶಿವಲಿಂಗಪ್ಪ, ತಿಪ್ಪೇಸ್ವಾಮಿರೆಡ್ಡಿ, ಮಹಾಂತೇಶರೆಡ್ಡಿ, ಎಲ್.ಐ.ಸಿ.ತಿಪ್ಪೇಸ್ವಾಮಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.