ನವದೆಹಲಿ : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ವಜೀರಿಸ್ತಾನ್ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಇದಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ ತಿರುಗೇಟು ನೀಡಿದೆ.
ವಜೀರಿಸ್ತಾನ್ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 13 ಪಾಕಿಸ್ತಾನದ ಸೈನಿಕರು ಸಾವನ್ನಪ್ಪಿದ್ದು, ಸ್ಥಳೀಯ ಅಧಿಕಾರಿಗಳು ಸೇರಿ 29 ಜನರು ಗಾಯಗೊಂಡಿದ್ದಾರೆ. ಉಸುದ್-ಅಲ್-ಹರ್ಬ್ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಆತ್ಮಾಹುತಿ ಬಾಂಬ್ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಸೇನೆ ಆರೋಪಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ವಿದೇಶಾಂಗ ಸಚಿವಾಲಯ, ಜೂನ್ 28 ರಂದು ವಜಿರಿಸ್ತಾನದಲ್ಲಿ ನಡೆದ ದಾಳಿಗೆ ಭಾರತವೇ ಕಾರಣ ಎಂದು ಪಾಕಿಸ್ತಾನ ಸೇನೆಯ ಅಧಿಕೃತ ಹೇಳಿಕೆಯನ್ನು ನಾವು ನೋಡಿದ್ದೇವೆ. ಪಾಕಿಸ್ತಾನ ಸೇನೆಯ ಈ ಹೇಳಿಕೆ ಖಂಡನೀಯ. ನಾವು ಈ ಹೇಳಿಕೆಯನ್ನು ಸಂಪೂರ್ಣ ತಿರಸ್ಕಾರದಿಂದ ತಿರಸ್ಕರಿಸುತ್ತೇವೆ ಎಂದು ತಿಳಿಸಿದೆ.
ಘಟನೆಯ ಹಿನ್ನೆಲೆ
ಆತ್ಮಾಹುತಿ ಬಾಂಬ್ ಇದ್ದ ವಾಹನವು ಮಿಲಿಟರಿ ಬೆಂಗಾವಲು ಪಡೆಯ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಂಬ್ ಸ್ಫೋಟಗೊಂಡು, 13 ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಜೊತೆಗೆ ಎರಡು ಮನೆಯ ಛಾವಣಿ ಕುಸಿದು 6 ಮಕ್ಕಳು, 10 ಜನ ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು 29 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.