ದಾವಣಗೆರೆ: ಮನುಷ್ಯತ್ವ ಎಲ್ಲಕಿಂತ ಮಿಗಿಲಾದುದು, ಕುಟುಂಬ ನಿರ್ವಹಿಸುವ ಹೆಣ್ಣನ್ನು ಸದಾ ಗೌರವದಿಂದ ಕಾಣಬೇಕು. ಎಲ್ಲಿ ಹೆಣ್ಣನ್ನು ಗೌರವಿಸಲಾಗುತ್ತೋ ಅಲ್ಲಿ ಸೌಖ್ಯದಿಂದ ಕೂಡಿರುತ್ತದೆ ಎಂದು ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ ಹೇಳಿದರು.
ಶನಿವಾರ (ಮಾ.8) ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ನಬಾರ್ಡ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಪುರುಷನ ಸಾಧನೆಯ ಹಿಂದೆ ಹೆಣ್ಣಿನ ಸಾಧನೆ ಇರುತ್ತದೆ. ಮಹಿಳೆಯಿಲ್ಲದೇ ಗಂಡು ಪರಿಪೂರ್ಣನಾಗಲಾರ, ಎಲ್ಲಿ ಹೆಣ್ಣನ್ನು ಗೌರವಿಸಲಾಗುತ್ತದೋ ಅಲ್ಲಿನ ವಾತಾವರಣ ಬಹಳ ಸೌಖ್ಯದಿಂದ ಕೂಡಿರುತ್ತದೆ.
ಯಾವುದೇ ಕೆಲಸಕ್ಕಾಗಲಿ ಇಂತಿಷ್ಟು ವೇತನ ಎಂದು ನಿಗದಿಪಡಿಸಲಾಗಿರುತ್ತದೆ. ಆದರೆ ಬೆಳಿಗ್ಗೆ ಎದ್ದು ಕಸ ಗುಡಿಸಿ, ರಂಗೋಲಿ ಹಾಕಿ ಅಡುಗೆ, ಪಾತ್ರೆ, ಬಟ್ಟೆಯಿಂದ ಹಿಡಿದು ರಾತ್ರಿ ಮಲಗುವ ತನಕ ಕೆಲಸ, ಮಕ್ಕಳ ಪಾಲನೆ, ಪೋಷಣೆಯಲ್ಲಿ ತೊಡಗುವ ಹೆಣ್ಣುಮಕ್ಕಳಿಗೆ ಯಾವ ವೇತನವೂ ಇಲ್ಲ. ಹೀಗೆ ಕುಟುಂಬ ಕಟ್ಟುವ ಹೆಣ್ಣುಮಕ್ಕಳಿಗೆ ಕೋಟಿ ಕೊಟ್ಟರೂ ಸಾಲದು. ಮೌಲ್ಯಾತೀತವಾದ ಇವರ ಸೇವೆಯನ್ನು ಎಲ್ಲರೂ ಗೌರವಿಸಬೇಕೆಂದರು.
ಮೊದಲು ನಮ್ಮ ಮನೆಯನ್ನು ನೆಮ್ಮದಿ, ಸಂತೋಷದಿಂದ ಇಟ್ಟುಕೊಳ್ಳಬೇಕು. ನಾನು ಮೊದಲು ಬದಲಾಗಬೇಕು. ನನ್ನ ಮನೆ ಬದಲಾದರೆ, ಇಡೀ ದೇಶ ಬದಲಾಗುತ್ತದೆ. ಗಾಂಧೀಜಿಯವರು ಹೇಳಿರುವಂತೆ ‘ಮತ್ತೊಬ್ಬರಲ್ಲಿ ಕಾಣುವ ಬದಲಾವಣೆಯನ್ನು ಮೊದಲು ನಿನ್ನಲ್ಲಿ ಮಾಡಿಕೊಳ್ಳಬೇಕು. ದೌರ್ಜನ್ಯವನ್ನು ತಡೆಯುವುದು ಹೆಣ್ಣುಮಕ್ಕಳಿಂದ ಸಾಧ್ಯವಿದ್ದು, ನೀವು ಸ್ವಾಭಿಮಾನದಿಂದ ಬದುಕಬೇಕು. ನಾವು ಮಹಿಳೆಯರಿಗೆ ಯಾವುದೇ ಪಾರಿತೋಷಕಗಳನ್ನು ಕೊಡವುದು ಬೇಕಿಲ್ಲ. ಅವರಿಗೆ ಸಮಾಜದಲ್ಲಿ ಗೌರವ ನೀಡಿದರೆ ಸಾಕು. ಈ ಗೌರವವನ್ನೇ ಸ್ತ್ರೀ ತನ್ನ ಸಾಧನೆಯ ಮೆಟ್ಟಿಲನ್ನಾಗಿ ಮಾಡಿಕೊಂಡು, ಧೈರ್ಯದಿಂದ ಮುನ್ನಡೆಯಲು ಸಾಧ್ಯವಾಗುತ್ತದೆ. ದೇಶದಲ್ಲಿ ಪುರುಷರಿಗೆ ನೀಡಿರುವ ಎಲ್ಲಾ ಸೌಲಭ್ಯಗಳನ್ನು, ಸ್ವಾತಂತ್ರ್ಯ್ರವನ್ನು ಮಹಿಳೆಯರಿಗೆ ನೀಡಬೇಕು. ಇದಕ್ಕಾಗಿ ಮಹಿಳೆಯರು ಹೋರಾಟ ಮಾಡಬೇಕು. ಮಹಿಳೆಯರು ಆರ್ಥಿಕವಾಗಿ ಮುನ್ನಡೆದರೆ, ಪುರುಷರಿಗೆ ಸಮಾನವಾಗಿ ಬದಕಲು ಸಾಧ್ಯವಿದೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ರೇಷ್ಮ ಕೌಸರ್ ಪ್ರಾಸ್ತವಿಕವಾಗಿ ಮಾತನಾಡಿ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಾವು ಕಾಣುವುದು ಕೇವಲ ಪುರುಷಪ್ರಧಾನ ಇತಿಹಾಸ. ಇಂದು ನಾವು ಹೊರಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಇದ್ದೇವೆ ನಿಜ. ಆಕಾಶದ ನಕ್ಷತ್ರ ನೋಡುತ್ತಾ ವಾಸ್ತವದ ಕಾಲ ಕೆಳಗಿನ ಕೆಂಡ ಮರೆಯುವಂತಿಲ್ಲ. ಹೆಣ್ಣು ಹುಟ್ಟಿನಿಂದ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿರುವುದು ನಿಜ. ಕುಟುಂಬದಲ್ಲಿ ಮಹಿಳೆಯರಿಗೆ ಪುರುಷರ ಬೆಂಬಲ ಬೇಕು. ಸ್ಥಳೀಯ ಸಂಸ್ಥೆಗಳು, ಪಂಚಾಯ್ತಿಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದೆ.
ಅದಕ್ಕೆ ಕಾರಣ ನಮ್ಮ ಕುಟುಂಬದ ಸಹಕಾರ. ಹಾಗೂ ಸಂಸದರಾದ ಡಾ.ಪ್ರಭಾಮಲ್ಲಿಕಾರ್ಜುನ್ ಅವರ ಬೆಂಬಲ ಕಾರಣ. ಪುರುಷರನ್ನು ದೂಷಿಸುವ ಬದಲು ಪರಸ್ಪರ ಸಹಬಾಳ್ವೆ ನಡೆಸುವುದು ಒಳ್ಳೆಯದು. ಹೆಣ್ಣುಮಕ್ಕಳು ಎಂದಿಗೂ ಸಾಧಕರೇ. ಕುಟುಂಬ ನಿರ್ವಹಣೆ ಎಂಬುದೊಂದು ದೊಡ್ಡ ಸಾಧನೆ. ಇತ್ತೀಚೆಗೆ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿದ್ದಾರೆ. ಆದರೆ ನಮ್ಮನ್ನು ನಾವೇ ತುಳಿದುಕೊಳ್ಳದೇ ಮುಂದೆ ಬರಬೇಕು. ಇದಕ್ಕೆ ಎಲ್ಲ ಮಹಿಳೆಯರ ಸಹಕಾರ ಅಗತ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 2023-24 ನೇ ಸಾಲಿನ ಅಸಾಧಾರಣ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ತನಿಷ್ಕಾ, ಸುಚಿತ್ರಾ, ಭಾವನ, ಸಾನ್ವಿ, ಭಾಗ್ಯಲಕ್ಷ್ಮೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಾಬಾರ್ಡ್ ಸಂಸ್ಥೆಯ ರಶ್ಮೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಾನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.