ಚಿತ್ರದುರ್ಗ : ಮೊಬೈಲ್, ಟಿ.ವಿ.ಹಾವಳಿಯಿಂದ ಯುವ ಪೀಳಿಗೆ ಒಳ್ಳೆಯ ವಿಚಾರಗಳನ್ನು ಕೇಳುವ, ಪಾಲಿಸುವ ಪರಿಪಾಠ ಕಳೆದುಕೊಂಡಿದೆ ಎಂದು ಹಿರಿಯ ರಂಗ ಕಲಾವಿದ ಹಾಗೂ ಸಂಘಟಕ ಆರ್.ಶೇಷಣ್ಣಕುಮಾರ್ ಬೇಸರ ವ್ಯಕ್ತಪಡಿಸಿದರು.
ಬಹುಮುಖಿ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಹಯೋಗದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಮಾಳೇನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ರಂಗ ಗೀತೆಗಳ ಗಾಯನ, ರಂಗ ಸನ್ಮಾನ, ನಾಟಕ ಪ್ರದರ್ಶನ ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ರಂಗಭೂಮಿ, ಸಾಹಿತ್ಯ, ಸಂಸ್ಕøತಿ, ಕಲೆ, ತುಂಬಾ ಪ್ರಯೋಜನಕಾರಿಯಾಗಲಿದೆ. ಅದಕ್ಕಾಗಿ ಯುವಕರು ರಂಗಭೂಮಿ ಬಗ್ಗೆ ಹೆಚ್ಚಿನ ಆಸಕ್ತಿ ತೋರಬೇಕಿದೆ. ತಂತ್ರಜ್ಞಾನಗಳ ಹೆಚ್ಚು ಬಳಕೆಯಿಂದ ಮಾನವ ಪರಸ್ಪರ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಜಾಗತಿಕರಣದ ಯುಗದಲ್ಲಿ ಯಾವ ದಿಕ್ಕಿನಕಡೆ ಸಾಗುತ್ತಿದ್ದೇವೆನ್ನುವುದೇ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಹಿರಿಯ ರಂಗಕರ್ಮಿ ಎಂ.ಸಿ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಳೆನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇರುದ್ರಪ್ಪ, ಮುಖಂಡ ಮಲ್ಲಿಕಾರ್ಜುನ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಹಿರಿಯ ರಂಗಭೂಮಿ ಕಲಾವಿದ ಆಯಿತೋಳು ವಿರುಪಾಕ್ಷಪ್ಪನವರನ್ನು ಸನ್ಮಾನಿಸಲಾಯಿತು.
ವಿರುಪಾಕ್ಷಪ್ಪ, ಎಸ್.ಚನ್ನಬಸಪ್ಪ, ಆಯಿತೋಳು ಮಾರುತಿ ಇವರುಗಳು ರಂಗಗೀತೆಗಳನ್ನು ಹಾಡಿದರು.
ಲತಾ ಪಾಟೀಲ್ ಹಾವೇರಿ, ಎಸ್.ಚನ್ನಬಸಪ್ಪ, ಬಹುಮುಖಿ ಕಲಾ ಕೇಂದ್ರದ ಕಾರ್ಯದರ್ಶಿ ಟಿ.ಮಧು, ಗುರುಕಿರಣ್, ರಾಘವೇಂದ್ರ, ಶ್ರೀನಿವಾಸ್ಮೂರ್ತಿ ಹಾಗೂ ಸಂಗಡಿಗರು ಬಿ.ತಿಪ್ಪೇರುದ್ರಪ್ಪ ರಚಿಸಿರುವ ಕೋಟು ಹಾಸ್ಯ ನಾಟಕ ಪ್ರದರ್ಶಿಸಿದರು.