ಬೆಂಗಳೂರು: ಕರ್ನಾಟಕದ ಗಂಡು ಕಲೆ ಎಂದೇ ಖ್ಯಾತಿಯ ಪಡೆದಿರುವ ಯಕ್ಷಗಾನ ಇದೀಗ ಹಲವು ವಿಘ್ನಗಳನ್ನು ಎದುರಿಸುತ್ತಿದೆ. ಕೆಲ ವರ್ಷಗಳ ಹಿಂದೆ ರಾತ್ರಿ ಬೆಳಗಾಗುವ ತನಕ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳಿಗೆ ಈಗ ಧ್ವನಿವರ್ಧಕ ನಿಯಮದ ಅನ್ವಯ ಮಧ್ಯರಾತ್ರಿಯಲ್ಲೇ ಬ್ರೇಕ್ ಬೀಳುತ್ತಿದೆ. ಈ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾದ ಬಳಿಕ, ಡಿಸಿಎಂ ಡಿ.ಕೆ. ಶಿವಕುಮಾರ್ ಯಕ್ಷಗಾನ ಪ್ರೇಮಿಗಳಿಗೆ ಭರವಸೆ ನೀಡಿದ್ದಾರೆ.
ಯಕ್ಷಗಾನದ ಪರ ಮಾತನಾಡಿದ ಶಾಸಕ
ವಿಧಾನಸಭೆಯ ಗಮನ ಸೆಳೆಯುತ್ತ, ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಧ್ವನಿವರ್ಧಕ ನಿಯಮದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯಕ್ಷಗಾನಕ್ಕೆ ತೊಂದರೆ ಉಂಟಾಗಿದೆ ಎಂದು ಪ್ರಶ್ನೆ ಎತ್ತಿದರು. ಈ ನಿಯಮಗಳನ್ನು ಸರ್ಕಾರ ಮರುಪರಿಶೀಲಿಸಿ ಯಕ್ಷಗಾನ ಪ್ರದರ್ಶನಕ್ಕೆ ಅನುಕೂಲ ಮಾಡುವಂತೆ ಅವರು ಮನವಿ ಮಾಡಿದರು.
ಡಿಕೆಶಿಯ ಭರವಸೆ
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಾನುಮತಿ ಪಡೆಯಲು ತೊಂದರೆ ಆಗುತ್ತಿದೆ ಎಂಬ ಬಗ್ಗೆ ನಾವು ಗಮನ ಹರಿಸಿದ್ದೇವೆ. ಯಕ್ಷಗಾನ ಮಾಡುವವರೆಲ್ಲಾ ತಕ್ಷಣ ಅರ್ಜಿ ಹಾಕಿ ನೆನೆಗುದಿಗೆ ಬಾರದಂತೆ 15 ದಿನಗಳ ತಯಾರಿ ನಡೆಸುತ್ತಾರೆ. ಯಕ್ಷಗಾನ ಬೆಳಗಿನ ಜಾವದವರೆಗೂ ನಡೆಯಲು ತಡೆಯಿಲ್ಲ. ಈ ನಿಯಮಗಳು ಬಿಜೆಪಿಯ ಆಡಳಿತಾವಧಿಯಲ್ಲಿಯೂ ರೂಪಗೊಂಡಿದ್ದವು. ಆದರೆ, ನಾವು ಈಗ ಈ ನಿರ್ಬಂಧಗಳನ್ನು ಪರಿಶೀಲಿಸುತ್ತೇವೆ. ಯಕ್ಷಗಾನ ಮತ್ತು ಬಯಲಾಟ ದೇಶದ ಆಸ್ತಿಗಳು, ನಮ್ಮ ಸಂಸ್ಕೃತಿಯ ಸಮೃದ್ಧಿಯ ಭಾಗ. ಇದಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದು ಭರವಸೆ ನೀಡಿದರು.