ಚಿತ್ರದುರ್ಗ :ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯವು ವಜ್ರಮಹೋತ್ಸವದ ಹೊಸ್ತಿಲಲ್ಲಿ ನಿಂತಿರುವ ಸಂಭ್ರಮದ ಹೊತ್ತಿನಲ್ಲಿ ಪಿ.ಯೂ. ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಉಚಿತ ಶಿಕ್ಷಣವನ್ನು ನೀಡಲು ಮುಂದಾಗಿದೆ ಎಂದು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಕುಮಾರಸ್ವಾಮಿ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1967ವಿದ್ಯಾವರ್ಧಕ ಸಂಘದ ಮೂಲಕ ತುಂಗಾ ಪದವಿಪೂರ್ವ ಕಾಲೇಜು, ತುಂಗಾ ಪದವಿ ಕಾಲೇಜು ಹಾಗೂ ತುಂಗಾ ಎಂ.ಕಾಂ. ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ನಡೆಸುತ್ತಾ ಮುನ್ನಡಿಯಿಡುತ್ತಿದೆ. ತನ್ನ ಸುದೀರ್ಘ ವಾದ ಶೈಕ್ಷಣಿಕ ಪ್ರಯಾಣದಲ್ಲಿ ಮಲೆನಾಡಿನ ಜನರ ಜೀವನದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದೆ. ಸರಿ ಸುಮಾರು 50- 60 ವರ್ಷಗಳ ಹಿಂದೆ ಮಲೆನಾಡಿನ ತೀರ್ಥಹಳ್ಳಿಯಲ್ಲಿ ವಿದ್ಯೆಯ ಬೆಳಕು ಮೂಡಿಸುವ ಮೂಲಕ ಶೈಕ್ಷಣಿಕ ವಲಯದಲ್ಲಿ ತುಂಗಾ ಮಹಾವಿದ್ಯಾಲಯ ಮುಂಚೂಣಿಯಲ್ಲಿದೆ. ಡಾ. ಬಿ. ಎನ್. ರಂಗಪ್ಪ, ಕಾಸರವಳ್ಳಿ ರಾಮಕೃಷ್ಣರಾಯರು, ಕಲ್ಲಹಳ್ಳ ರಾಮಭಟ್ ಮೊದಲಾದ ಮುನ್ನೋಟದ ಶಿಕ್ಷಣ ಪ್ರೇಮಿಗಳ ಅವಿರತ ಶ್ರಮದ ಫಲವಾಗಿ ತುಂಗಾ ವಿದ್ಯಾವರ್ಧಕ ಸಂಘ(ರಿ), ತುಂಗಾ ಮಹಾವಿದ್ಯಾಲಯ ತನ್ನ ಅರವತ್ತರ ವಜ್ರಮಹೋತ್ಸವದ ಹೊಸ್ತಿಲಿಗೆ ಬಂದು ನಿಂತಿದೆ.
ಈ ಸಂಭ್ರಮದ ಭಾಗವಾಗಿ 2026-2027 ನೇ ಸಾಲಿನಲ್ಲಿ ತುಂಗಾ ಪಿಯೂ ಕಾಲೇಜಿನಲ್ಲಿ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ70ಕ್ಕಿಂತಲೂ ಹೆಚ್ಚಿನ ಅಂಕÀ ಪಡೆದವರಿಗೆ ಉಚಿತವಾಗಿ ಶಿಕ್ಷಣ ನೀಡಲು ನಿರ್ಧರಿಸಿದೆ. ಹಿಂದಿನಿಂದಲೂ ತುಂಗಾ ವಿದ್ಯಾಸಂಸ್ಥೆ ಶಿಕ್ಷಣವನ್ನು ವ್ಯಾಪಾರವಾಗಿ ಭಾವಿಸದ ಸೇವೆಯೆಂದೇ ಪರಿಗಣಿಸಿ ನಡೆಸಿಕೊಂಡು ಬಂದಿದ್ದು ಈಗಿನ ಆಡಳಿತ ಮಂಡಲಿಯೂ ಮುಂದುವರಿಸುತ್ತಿದೆ. ಎಷ್ಟೋ ಬಡ-ಕಡು ಬಡತನದ ಮಕ್ಕಳ ಶೈಕ್ಷಣಿಕ ಕನಸಿಗೆ ಈ ಮೂಲಕ ವಜ್ರ ಮಹೋತ್ಸವದ ಕೊಡುಗೆಯಾಗಿ ಎರಡು ವರ್ಷಗಳ ‘ಉಚಿತ ಶಿಕ್ಷಣ’ದ ಯೋಜನೆಯನ್ನು ಘೋಷಿಸುತ್ತಿದೆ. ಈ ಎರಡು ವರ್ಷಗಳ ಉಚಿತ ಪಿ.ಯೂ. ಶಿಕ್ಷಣದ ಸೌಲಭ್ಯವನ್ನು ಅಹರ್À ವಿದ್ಯಾರ್ಥಿಗಳು ಏಳಸಿಕೊಳ್ಳುವಂತೆ ಕೋರಲಾಗಿದೆ.
ತುಂಗಾ ಮಹಾವಿದ್ಯಾಲಯವು ತನ್ನ ಶೈಕ್ಷಣಿಕ ಸಾಧನೆಯ ದಾರಿಯಲ್ಲಿ ಈವರೆಗೆ 08 ಮೊದಲ ರ್ಯಾಂಕುಗಳೂ ಸೇರಿದಂತೆ ಒಟ್ಟು 58 ರ್ಯಾಂಕುಗಳನ್ನುಗಳಿಸಿ ಕುವೆಂಪು ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯುತ್ತಮ ಕಾಲೇಜೆಂದು ಹೆಸರು ಗಳಿಸಿದೆ. ಸಿಇಟಿಯಲ್ಲಿ ಆರನೇ ರ್ಯಾಂಕ್ ಗಳಿಸಿರುವುದು ಕೂಡಾ ನಮ್ಮ ಕಾಲೇಜಿನ ಹೆಮ್ಮೆಯಾಗಿದೆ. ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹೆಸರಾಂತ ಕ್ರೀಡಾಪಟು, ರಾಜಕೀಯ ಮುತ್ಸದ್ದಿಗಳು, ಶಿಕ್ಷಣ ತಜ್ಞರು, ಉಪ ಕುಲಪತಿಗಳು, ಪ್ರಾಧ್ಯಾಪಕರು. ಸಾಹಿತಿ-ಕಲಾವಿದರು, ಉದ್ಯಮಶೀಲರು, ವಿಜ್ಞಾನಿಗಳು, ಸೈನಿಕರು, ವೈದ್ಯರು, ಎಂಜಿನಿಯರುಗಳು, ಪತ್ರಿಕೋದ್ಯಮಿಗಳು, ಪ್ರಗತಿಪರ ಕೃಷಿಕರು, ಉತ್ತಮ ಗೃಹಸ್ಥರೂ ಆಗಿ ಸಮಾಜದ ಸ್ವಾಸ್ಥ್ಯಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದರು.
ಈ ವಿದ್ಯಾಸಂಸ್ಥೆಗೆ ಪಿಯೂ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಸೇರುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಡಾ.ಆರ್. ಕುಮಾರಸ್ವಾಮಿ ಮನವಿ ಮಾಡಿದರು.
ಗೋಷ್ಟಿಯಲ್ಲಿ ಪಿಯು ಉಪನ್ಯಾಸಕರಾದ ನವೀನ್ ಉಪಸ್ಥಿತರಿದ್ದರು.































