ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಶಾಸಕ ಟಿ. ರಘುಮೂರ್ತಿ ಅವಿರೋಧ ಆಯ್ಕೆ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ (ಡಿಸಿಸಿ) ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಚಿವ ಡಿ.ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನಲೆಯಲ್ಲಿ, ಸಹಕಾರ ಸಂಘಗಳ ಕಾಯ್ದೆ ಪ್ರಕಾರ ಶುಕ್ರವಾರ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಪ್ ಘೋಷಿಸಿದರು.

ಬ್ಯಾಂಕಿನ ಪ್ರಸ್ತುತ ಆಡಳಿತ ಮಂಡಳಿಗೆ ಇನ್ನು 3 ವರ್ಷ 4 ತಿಂಗಳ ಅಧಿಕಾರಾವಧಿ ಬಾಕಿ ಉಳಿದಿದೆ. ಅಂದರೆ, 2029ರ ಸೆಪ್ಟೆಂಬರ್ ತಿಂಗಳವರೆಗೆ ಈ ಬ್ಯಾಂಕ್ ಆಡಳಿತ ಮಂಡಳಿಯ ಅವಧಿ ಇರಲಿದ್ದು, ಅಲ್ಲಿಯವರೆಗೂ ನೂತನ ಅಧ್ಯಕ್ಷರು ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.

ರೈತಸ್ನೇಹಿ ಆಡಳಿತದ ಭರವಸೆ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಬ್ಯಾಂಕ್‍ನ ಪ್ರಗತಿ ಹಾಗೂ ರೈತರ ಹಿತರಕ್ಷಣೆಗೆ ಬದ್ಧವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

1955 ರಲ್ಲಿ ಪ್ರಾರಂಭವಾದ ಡಿಸಿಸಿ ಬ್ಯಾಂಕ್, ಕಳೆದ ಸುಮಾರು 70 ವರ್ಷಗಳಿಂದ ಜಿಲ್ಲೆಯ ರೈತಾಪಿ ವರ್ಗದ ಹಿತ ಕಾಯುವಲ್ಲಿ ಯಶಸ್ವಿಯಾಗಿದೆ. ರಾಜ್ಯದಲ್ಲಿರುವ 21 ಡಿಸಿಸಿ ಬ್ಯಾಂಕ್‍ಗಳ ಪೈಕಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅತ್ಯುತ್ತಮ ಆರ್ಥಿಕ ಪರಿಸ್ಥಿತಿಯಲ್ಲಿದೆ. ಜಿಲ್ಲಾ ಕೇಂದ್ರದ ಮುಖ್ಯ ಕಚೇರಿ ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಒಟ್ಟು 22 ಶಾಖೆಗಳನ್ನು ಬ್ಯಾಂಕ್ ಹೊಂದಿದೆ. ಬ್ಯಾಂಕ್‍ನಲ್ಲಿ ಒಟ್ಟು 160 ಮಂಜೂರಾದ ಹುದ್ದೆಗಳಿದ್ದು, ಸದ್ಯ 151 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 9 ಹುದ್ದೆಗಳು ಮಾತ್ರ ಖಾಲಿ ಇವೆ. ಹಿರಿಯೂರು, ಮೊಳಕಾಲ್ಮುರು ಹಾಗೂ ಹೊಸದುರ್ಗ ತಾಲ್ಲೂಕುಗಳಲ್ಲಿ ಬ್ಯಾಂಕ್ ಸದ್ಯ ಸ್ವಂತ ಕಟ್ಟಡವನ್ನು ಹೊಂದಿದೆ. ಒಟ್ಟು 422 ಸಹಕಾರ ಸಂಘಗಳು ಬ್ಯಾಂಕ್‍ನ ಸದಸ್ಯತ್ವ ಹೊಂದಿವೆ. ಬ್ಯಾಂಕ್‍ನ ಒಟ್ಟು ಶೇರು ಬಂಡವಾಳ ₹106.26 ಕೋಟಿಗಳಾಗಿದ್ದು, ಇದರಲ್ಲಿ ಸರ್ಕಾರದ ಪಾಲು ₹1.41 ಕೋಟಿಗಳಾಗಿದೆ ಎಂದು ತಿಳಿಸಿದರು.

ಕಳೆದ 2025-26 ನೇ ಆರ್ಥಿಕ ವರ್ಷದಲ್ಲಿ ಕೃಷಿ ಉದ್ದೇಶಗಳಿಗಾಗಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಜಿಲ್ಲೆಯ 56,263 ರೈತರಿಗೆ ಒಟ್ಟು ₹496 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಒಟ್ಟಾರೆಯಾಗಿ ₹115 ಕೋಟಿ ಸಾಲ ನೀಡಲಾಗಿದೆ. ರಾಜ್ಯ ಸರ್ಕಾರದ ಯೋಜನೆ ಅಡಿಯಲ್ಲಿ ಶೂನ್ಯ ಬಡ್ಡಿ ದರದಲ್ಲಿ 619 ರೈತರಿಗೆ ₹35 ಕೋಟಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಕಳೆದ ವರ್ಷ ಬ್ಯಾಂಕ್ ಒಟ್ಟು ₹106 ಕೋಟಿ ವಹಿವಾಟು ನಡೆಸಿದ್ದು, ಎಲ್ಲಾ ವೆಚ್ಚಗಳನ್ನು ಕಳೆದು ಸುಮಾರು ₹10 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

2026-27 ನೇ ಸಾಲಿಗೆ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಶೂನ್ಯ ಬಡ್ಡಿ ದರದಲ್ಲಿ ಜಿಲ್ಲೆಯ 60,000 ರೈತರಿಗೆ ಒಟ್ಟು ₹558 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯ 7,152 ರೈತರಿಗೆ ₹ 70.75 ಕೋಟಿ ಹಾಗೂ ಪರಿಶಿಷ್ಟ ಪಂಗಡದ 8,344 ರೈತರಿಗೆ ₹76 ಕೋಟಿ ಸಾಲ ನೀಡಲು ಕಾಯ್ದಿರಿಸಲಾಗಿದೆ. ರೈತರ ಆರ್ಥಿಕ ಸಬಲೀಕರಣವೇ ನಮ್ಮ ಬ್ಯಾಂಕ್‍ನ ಮೂಲ ಉದ್ದೇಶವಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಜನಪರ ಯೋಜನೆಗಳ ಮೂಲಕ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅನ್ನು ರಾಜ್ಯದಲ್ಲೇ ಮಾದರಿ ಸಹಕಾರಿ ಬ್ಯಾಂಕ್ ಆಗಿ ರೂಪಿಸಲಾಗುವುದು ಎಂದು ಟಿ.ರಘುಮೂರ್ತಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದುರ್ಗ ಜಿಲ್ಲೆಯು ಮಧ್ಯ ಕರ್ನಾಟಕದ ಬರಪೀಡಿತ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡದೆ, ಬ್ಯಾಂಕ್‍ನ ಭದ್ರತೆಯನ್ನು ಕಾಯ್ದುಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಕ್ರಿಕೆಟ್‍ನಲ್ಲಿ ವಿಕೆಟ್ ಇದ್ದರೆ ಮಾತ್ರ ರನ್ ಗಳಿಸಲು ಸಾಧ್ಯವಿರುವಂತೆ, ಬ್ಯಾಂಕ್ ಉಳಿದರೆ ಮಾತ್ರ ರೈತರಿಗೆ ಸೇವೆ ನೀಡಲು ಸಾಧ್ಯ ಎಂದು ತಿಳಿಸಿದ ಅವರು, ನಮ್ಮ ಮೊದಲ ಆದ್ಯತೆ ರೈತರ ಕಲ್ಯಾಣವೇ ಆಗಿದೆ. ಆದರೆ, ಬ್ಯಾಂಕಿನ ಆರ್ಥಿಕ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕೃಷಿಯೇತರ ಸಾಲಗಳನ್ನು ನೀಡಲು ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಿವೃತ್ತ ನೌಕರರಿಗೆ ಪಿಂಚಣಿ ವ್ಯವಸ್ಥೆ: ಬ್ಯಾಂಕಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗುವ ನೌಕರರ ಕಲ್ಯಾಣಕ್ಕಾಗಿ ವಿಶೇಷ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನೂತನ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಬ್ಯಾಂಕಿನ ಲಾಭಾಂಶದಲ್ಲಿ ಕಾಯ್ದಿರಿಸುವ ಠೇವಣಿಯಿಂದ ಬರುವ ಬಡ್ಡಿಯ ಹಣದ ಮೂಲಕ ನಿವೃತ್ತ ನೌಕರರಿಗೆ ಪಿಂಚಣಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಉಪಾಧ್ಯಕ್ಷ ಹೆಚ್.ಬಿ.ಮಂಜುನಾಥ್, ನಿರ್ದೇಶಕರಾದ ಟಿ.ಮಹಂತೇಶ್, ಎಸ್.ಆರ್.ಗಿರೀಶ್, ನಾಗರೆಡ್ಡಿ, ಪಿ.ರಾಜು, ಎಂ.ನಿಶಾನಿ ಜಯಣ್ಣ, ಡಿ.ಎಸ್.ಶಶಿಧರ, ಪಿ.ವಿನೋದಾ ಸ್ವಾಮಿ, ಕೆ.ಜಗಣ್ಣ, ಹೆಚ್.ಎಂ.ದ್ಯಾಮಣ್ಣ, ಪಿ.ತಿಪ್ಪೇಸ್ವಾಮಿ, ಟಿ.ಮಹಂತೇಶ್, ಡಾ.ಕೆ.ಅನಂತ್, ಓ.ಮಂಜುನಾಥ್, ಸಹಕಾರ  ಸಂಘಗಳ ಉಪನಿಬಂಧಕ ದಿಲೀಪ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon