ಕೊಲ್ಕತ್ತಾ: ಪಾತ್ರೆ ತೊಳೆದು ಜೀವನ ಸಾಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತೆ ಕಲಿತ ಮಾಝಿ ಅವರಿಗೆ 2021 ರಲ್ಲಿ ಬಿಜೆಪಿಯಿಂದ ಟಿಕೆಟ್ ಪ್ರಕಟಿಸಲಾಗಿತ್ತು. ಬರ್ಧಮಾನ್ ಜಿಲ್ಲೆಯ ಆಸುಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಲಿತಾ ಸೋಲು ಕಂಡಿದ್ದರು. 2026ರಲ್ಲಿ ಮತ್ತೆ ಅವರಿಗೆ ಅದೇ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಟಿಎಂಸಿ ಅಭ್ಯರ್ಥಿ ವಿರುದ್ಧ 12,535 ಮತಗಳ ಅಂತರದಿಂದ ಗೆಲುವು ಕಂಡು ಶಾಸಕಿಯಾಗಿ ಆಯ್ಕೆಯಾಗಿದ್ದ ಕಲಿತಾ ಮಾಝಿ ಅವರಿಗೆ ಈಗ ಸಚಿವ ಸ್ಥಾನ ನೀಡಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಗಿ ಬಿಜೆಪಿಯ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕರಿಸಿದ ಮೂರು ವಾರಗಳ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ.
ಕೊಲ್ಕತ್ತಾದ ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್.ಎನ್. ರವಿ ಪ್ರಮಾಣ ವಚನ ಬೋಧಿಸಿದ್ದಾರೆ. ಕೆಲವರು ಸಂಪುಟ ಸಚಿವರಾಗಿ, ಮತ್ತೆ ಕೆಲವರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಮೂಲಕ ಮಂತ್ರಿಮಂಡಲ ಸಾಮರ್ಥ್ಯ 41ಕ್ಕೆ ಏರಿಕೆಯಾಗಿದೆ. ಪೂರ್ವ ಬರ್ಧಮಾನ ಜಿಲ್ಲೆಯ ಆಸುಗ್ರಾಮ ಕ್ಷೇತ್ರದಿಂದ ಬಿಜೆಪಿ ಶಾಸಕಿ ಆಗಿರುವ ಕಲಿತಾ ಸಚಿವರಾಗಿದ್ದಾರೆ. ಅವರ ಪತಿ ಪ್ಲಂಬರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

































