ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ನೋಂದಾಯಿಸಿಕೊಂಡಿದ್ದ ರೈತರ ಪೈಕಿ 55,326 ರೈತರಿಗೆ ಒಟ್ಟು ರೂ.81.56 ಕೋಟಿಗಳ ವಿಮಾ ಪರಿಹಾರ ಮೊತ್ತ ಪಾವತಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 88,747 ರೈತರು ರೂ. 12.44 ಕೋಟಿಗಳ ರೈತರ ವಂತಿಕೆ ಪಾವತಿಸಿ ನೋಂದಾಯಿಸಿಕೊಂಡಿದ್ದರು. ಸದ್ಯ ಪಾವತಿಯಾಗಿರುವ ಪರಿಹಾರ ಧನವನ್ನು ಲೆಕ್ಕ ಹಾಕಿದರೆ, ರೈತರು ಪಾವತಿಸಿದ ಒಟ್ಟು ವಂತಿಕೆಗೆ ಶೇ.655.62 ರಷ್ಟು ಮೊತ್ತದ ಪರಿಹಾರ ಲಭಿಸಿದಂತಾಗಿದೆ.
ಬೆಳೆ ಕಟಾವು ಪ್ರಯೋಗಗಳ ಇಳುವರಿ ಆಧಾರದ ಮೇಲೆ ಚಳ್ಳಕೆರೆ ತಾಲ್ಲೂಕಿನ 30 ವಿಮಾ ಘಟಕಗಳು (ಗ್ರಾಮ ಪಂಚಾಯತಿ) ಹಾಗೂ ಮೊಳಕಾಲೂರು ತಾಲ್ಲೂಕಿನ 03 ವಿಮಾ ಘಟಕಗಳಲ್ಲಿ ಸರಾಸರಿಗಿಂತ ಕಡಿಮೆ ಇಳುವರಿ ದಾಖಲಾಗಿರುವುದರಿಂದ, ಅಲ್ಲಿನ ಅರ್ಹ ರೈತರ ಖಾತೆಗಳಿಗೆ ವಿಮೆ ಪರಿಹಾರ ಜಮೆಯಾಗಿದೆ. ಆದರೆ, ಚಳ್ಳಕೆರೆ ತಾಲ್ಲೂಕಿನ 12 ಹಾಗೂ ಮೊಳಕಾಲೂರು ತಾಲ್ಲೂಕಿನ 14 ವಿಮಾ ಘಟಕಗಳಲ್ಲಿ ಬೆಳೆ ಕಟಾವು ಪ್ರಯೋಗದ ವೇಳೆ ಸರಾಸರಿಗಿಂತ ಹೆಚ್ಚಿನ ಇಳುವರಿ ದಾಖಲಾಗಿದೆ. ಹೀಗಾಗಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಗಳ ಅನ್ವಯ ಈ ಪ್ರದೇಶಗಳು ನಷ್ಟ ಪರಿಹಾರಕ್ಕೆ ಅರ್ಹವಾಗಿರುವುದಿಲ್ಲ. ಆದ್ದರಿಂದ ಇಲ್ಲಿನ ರೈತರಿಗೆ ಯಾವುದೇ ವಿಮಾ ಮೊತ್ತ ಪಾವತಿಯಾಗಿಲ್ಲ.
ಬೆಳೆ ವಿಮೆ ಪರಿಹಾರವು ಸಂಪೂರ್ಣವಾಗಿ ಸರಾಸರಿ ಇಳುವರಿ ಮತ್ತು ಕುಂಠಿತ ಇಳುವರಿಯನ್ನು ಆಧರಿಸಿರುತ್ತದೆ. ಎಲ್ಲಾ ಗ್ರಾಮ ಪಂಚಾಯತಿ ಅಥವಾ ವಿಮಾ ಘಟಕಗಳು ಏಕರೂಪವಾಗಿರುವುದಿಲ್ಲ. ಪ್ರತಿ ಘಟಕದ ಸರಾಸರಿ ಇಳುವರಿ ವಿಭಿನ್ನವಾಗಿರುತ್ತದೆ. ಮಳೆ ಹಾಗೂ ಹವಾಮಾನ ವೈಪರೀತ್ಯಗಳು ಬೇರೆ ಬೇರೆಯಾಗಿರುವುದರಿಂದ ಜಿಲ್ಲಾದ್ಯಂತ ಏಕರೂಪದ ಪರಿಹಾರ ನೀಡಲು ಬರುವುದಿಲ್ಲ, ಹಾಗಾಗಿ ರೈತರು ಯಾವುದೇ ಗೊಂದಲಗಳಿಗೆ ಕಿವಿಗೊಡಬಾರದು.
ಮತ್ತೊಂದೆಡೆ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 77 ರೈತರಿಗೆ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ ರೂ.46.50 ಲಕ್ಷ ಜಮೆಯಾಗಿದೆ. ಈ ಕುರಿತು ಈಗಾಗಲೇ ಕೃಷಿ, ಕಂದಾಯ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕ್ಷೇತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿದ್ದು, ಮಾರ್ಗಸೂಚಿ ಉಲ್ಲಂಘನೆ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಬೆಳೆ ಕಟಾವು ಪ್ರಯೋಗದಲ್ಲಿ ಸರಾಸರಿಗಿಂತ ಹೆಚ್ಚಿನ ಇಳುವರಿ ದಾಖಲಾಗಿ, ನಿಯಮಾವಳಿಗಳ ಪ್ರಕಾರ ವಿಮೆಯಿಂದ ವಂಚಿತವಾದ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ, ಅಬ್ಬೇನಹಳ್ಳಿ, ಹಿರೇಹಳ್ಳಿ, ನೇರಲಗುಂಟೆ, ಮನ್ನೇಕೋಟ, ಮಲ್ಲೂರಹಳ್ಳಿ, ಮೈಲನಹಳ್ಳಿ, ಬೇಡರೆಡ್ಡಿಹಳ್ಳಿ, ದೇವರೆಡ್ಡಿಹಳ್ಳಿ, ಓಬಳಾಪುರ, ಪಗಡಲಬಂಡ, ಚಳ್ಳಕೆರೆ ಪಟ್ಟಣ ಪ್ರದೇಶ ಹಾಗೂ ಮೊಳಕಾಲೂರು ತಾಲ್ಲೂಕಿನ ಬಿ.ಜಿ.ಕೆರೆ, ಕೊಂಡಹಳ್ಳಿ, ಜೆ.ಬಿ.ಹಳ್ಳಿ, ರಾಯಪುರ, ರಾಂಪುರ, ಸಂತೇಗುಡ್ಡ, ಹಾನಗಲ್, ಚಿಕ್ಕೇರಹಳ್ಳಿ, ನಾಗಸಮುದ್ರ, ನೇರ್ಲಹಳ್ಳಿ, ತಮ್ಮೇನಹಳ್ಳಿ, ತುಮಕೂರ್ಲಹಳ್ಳಿ, ಸಿದ್ಧಾಪುರ ಮತ್ತು ಮೊಳಕಾಲೂರು ಪಟ್ಟಣ ಪ್ರದೇಶದ ಮಳೆ ಆಶ್ರಿತ ಶೇಂಗಾ ಬೆಳೆ ಘಟಕಗಳು ನಷ್ಟ ಪರಿಹಾರಕ್ಕೆ ಅರ್ಹವಾಗಿರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.
































