ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು, ಅವರ ಕುಟುಂಬದ ಸದಸ್ಯರು ಹಾಗೂ ಅರ್ಹ ಅವಲಂಬಿತರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ' (AB-ArK) ಯೋಜನೆಯ ನಿಯಮಾವಳಿಗಳಡಿಯಲ್ಲೇ "ಸಂಪೂರ್ಣ ಶೂನ್ಯ" (Zero Premium) ವಾರ್ಷಿಕ ವಂತಿಕೆ ಆಧಾರಿತ ನಗದು ರಹಿತ ಸಮಗ್ರ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದೆ.
ಈ ಯೋಜನೆಯಿಂದಾಗಿ ನೌಕರರು ಆಸ್ಪತ್ರೆ ವೆಚ್ಚದ ಚಿಂತೆಯಿಲ್ಲದೆ ಉನ್ನತ ಮಟ್ಟದ ವೈದ್ಯಕೀಯ ಸೇವೆ ಪಡೆಯಲು ಅನುಕೂಲವಾಗಲಿದೆ.
ಯೋಜನೆಯ ಪ್ರಮುಖ ಮುಖ್ಯಾಂಶಗಳು:
ಲಕ್ಷಾಂತರ ಜನರಿಗೆ ಪ್ರಯೋಜನ: ಪ್ರಾರಂಭಿಕ ಹಂತದಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.11 ಲಕ್ಷ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅರ್ಹ ಅವಲಂಬಿತರು ಸೇರಿದಂತೆ ಒಟ್ಟು ಸುಮಾರು 4.93 ಲಕ್ಷ ಫಲಾನುಭವಿಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
ವಾರ್ಷಿಕ ₹5 ಲಕ್ಷದವರೆಗೆ ವೈದ್ಯಕೀಯ ಕವರ್: ಈ ಯೋಜನೆಯು ನಿಗದಿಪಡಿತ ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಯಾಗಿದ್ದು, ಅರ್ಹ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ₹5.00 ಲಕ್ಷದವರೆಗೆ ಫ್ಲೋಟರ್ ಆಧಾರದ ಮೇಲೆ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶ ಕಲ್ಪಿಸುತ್ತದೆ.ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಯೋಜನೆಯಡಿ ಎಬಿ-ಎಆರ್ಕೆ (AB-ArK) ಅಡಿಯಲ್ಲಿ ನೋಂದಾಯಿತ/ಸಂಯೋಜಿತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೌಕರರು ಉಚಿತವಾಗಿ ಚಿಕಿತ್ಸೆ ಪಡೆಯಬಹುದು.
ವೇತನ/ಪಿಂಚಣಿಯಿಂದ ವಂತಿಕೆ ಕಡಿತ: ಸೇವಾನಿರತ ನೌಕರರ ಮೂಲ ವೇತನದ ಶೇಕಡಾ 1.25 ರಷ್ಟು ಹಾಗೂ ಕುಟುಂಬ ಪಿಂಚಣಿದಾರರ ಮೂಲ ಪಿಂಚಣಿಯ ಶೇಕಡಾ 0.75 ರಷ್ಟು ಮೊತ್ತವನ್ನು ಮಾಸಿಕವಾಗಿ ವಂತಿಕೆಯಾಗಿ ಪಾವತಿಸಿಕೊಳ್ಳಲಾಗುತ್ತದೆ.
ಆರ್ಥಿಕ ಪಾಲುವಿಕೆ ಮತ್ತು ಸರ್ಕಾರದ ವೆಚ್ಚ:
ವಾರ್ಷಿಕ ವೆಚ್ಚದ ಅಂದಾಜು: ಯೋಜನೆಯಡಿ ವಾರ್ಷಿಕವಾಗಿ ಅಂದಾಜು ₹117 ಕೋಟಿ ಮೊತ್ತ ಸಂಗ್ರಹವಾಗುವ ನಿರೀಕ್ಷೆಯಿದ್ದು, ವಾರ್ಷಿಕ ಚಿಕಿತ್ಸಾ ವೆಚ್ಚವು ಸುಮಾರು ₹81.75 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು: ಎಬಿ-ಎಆರ್ಕೆ (AB-ArK) ನೀತಿಯನ್ವಯ, ಚಿಕಿತ್ಸಾ ವೆಚ್ಚದ ಶೇಕಡಾ 70 ರಷ್ಟು ಮೊತ್ತವನ್ನು ವಂತಿಕೆಯಿಂದ ಹಾಗೂ ಉಳಿದ ಶೇಕಡಾ 30 ರಷ್ಟು ಮೊತ್ತವನ್ನು ರಾಜ್ಯ ಸರ್ಕಾರವು ಭರಿಸಲಿದೆ. ಇದರಂತೆ ವಾರ್ಷಿಕವಾಗಿ ಅಂದಾಜು ₹57.22 ಕೋಟಿ ವಂತಿಕೆಯಿಂದ ಮತ್ತು ₹24.53 ಕೋಟಿ ರಾಜ್ಯ ಸರ್ಕಾರದ ಪಾಲಿನಿಂದ ಭರಿಸಲ್ಪಡುತ್ತದೆ.
ಕಾರ್ಪಸ್ ಫಂಡ್ ಸೃಷ್ಟಿ: ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ನಿಧಿಯ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಕಾರ್ಪಸ್ ಬಡ್ಡೀ ಹಣದಲ್ಲಿ ಶೇಕಡಾ 85 ರಷ್ಟು ಬಡ್ಡಿ ಮೊತ್ತವನ್ನು ಹಾಗೂ 0.05% (5 basis points) ರಾಜ್ಯ ಸರಕಾರದ ಸಾಲದ ಮೇಲಿನ ಬಡ್ಡಿಯನ್ನು ಬಳಸಲು ಅನುಮತಿ ನೀಡಲಾಗಿದೆ.
ಅನುಷ್ಠಾನ ಮತ್ತು ನಿರ್ವಹಣೆ:
ಈ "ಸಂಪೂರ್ಣ ಶೂನ್ಯ" ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಜಾರಿಗೊಳಿಸಲಾಗುತ್ತದೆ. ಫಲಾನುಭವಿಗಳ ನೋಂದಣಿ, ಮೊತ್ತ ಸಂಗ್ರಹಣೆ, ಚಿಕಿತ್ಸೆಗಳ ಪೂರ್ವ ಅನುಮೋದನೆ (Pre-authorization), ತುರ್ತು ಚಿಕಿತ್ಸೆ, ಕ್ಲೈಮ್ ನಿರ್ವಹಣೆ ಹಾಗೂ ಯೋಜನೆಗಳ ಮೇಲ್ವಿಚಾರಣೆಯನ್ನು ಎಬಿ-ಎಆರ್ಕೆ ಚೌಕಟ್ಟಿನೊಂದಿಗೆ ಸಂಯೋಜಿಸಿ ನಿರ್ವಹಿಸಲಾಗುತ್ತದೆ.
ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಗುಣಮಟ್ಟದ, ಕಷ್ಟರಹಿತ ಹಾಗೂ ನಗದುರಹಿತ ಆರೋಗ್ಯ ಸೇವೆಯನ್ನು ಖಾತರಿಪಡಿಸುವ ಜತೆಗೆ, ತುರ್ತು ಆರೋಗ್ಯ ವೆಚ್ಚಗಳಿಂದ ಉಂಟಾಗಬಹುದಾದ ಆರ್ಥಿಕ ಸಂಕಷ್ಟದಿಂದ ರಕ್ಷಣೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.