ಚಿತ್ರದುರ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮೀ’ ಯೋಜನೆಗೆ ಮೂರು ವರ್ಷ ತುಂಬಿದ ನೆನಪಿಗಾಗಿ, ಐತಿಹಾಸಿಕ ಚಿತ್ರದುರ್ಗದ ಕಲ್ಲಿನ ಕೋಟೆಯ ಪ್ರಮುಖ ಪ್ರವೇಶದ್ವಾರವಾದ ‘ರಂಗಯ್ಯನ ಬಾಗಿಲು’ ಸ್ಮಾರಕಕ್ಕೆ ಆಕರ್ಷಕ ಗುಲಾಬಿ ಬಣ್ಣದ (ಪಿಂಕ್ ಲೈಟ್) ದೀಪಾಲಂಕಾರ ಮಾಡಲಾಗಿದ್ದು, ಕೋಟೆ ನಗರಿ ಕಂಗೊಳಿಸುತ್ತಿದೆ.
‘ಗೃಹಲಕ್ಷ್ಮೀ’ ಯೋಜನೆಯು ಆಗಸ್ಟ್ 30ಕ್ಕೆ ಯಶಸ್ವಿಯಾಗಿ ಮೂರು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ, ಈ ಸಂಭ್ರಮದ ಸವಿನೆನಪಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿದ್ಯುತ್ ದೀಪಾಲಂಕಾರ ಆಯೋಜಿಸಿದ್ದು, ಐತಿಹಾಸಿಕ ಕಲ್ಲಿನಕೋಟೆ ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸುತ್ತಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ. 2,000/- ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ‘ಗೃಹಲಕ್ಷ್ಮೀ’ ಯೋಜನೆ ನೆರವಾಗಿದೆ.
‘ಗೃಹಲಕ್ಷ್ಮೀ’ ಯೋಜನೆ ಮೂರು ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಮಹಿಳೆಯರ ಹೆಮ್ಮೆಯ ಸಂಕೇತವೆಂದು ಗುರುತಿಸಿರುವ ಗುಲಾಬಿ ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಐತಿಹಾಸಿಕ ರಂಗಯ್ಯನ ಬಾಗಿಲಿನ ವಿಶೇಷತೆ: ಚಿತ್ರದುರ್ಗದ ಏಳನೇ ಸುತ್ತು ಪರ್ವತದ ದಕ್ಷಿಣ ತುದಿಯಿಂದ ಪೂರ್ವ ಮತ್ತು ಉತ್ತರ ಭಾಗಗಳ ಹಳೆ ಊರನ್ನು ಸೇರಿದಂತೆ ಪೂರ್ಣ ಪರ್ವತವನ್ನು ಸುತ್ತುವರಿದಿದೆ. ಈ ಏಳನೇ ಸುತ್ತಿನ ಕೋಟೆಯ ಮೊದಲನೆಯ ಹಾಗೂ ಪೂರ್ವ ದಿಕ್ಕಿನ ಮಹಾದ್ವಾರವೇ ‘ರಂಗಯ್ಯನ ಬಾಗಿಲು’.
ನಾಯಕರ ಮನೆದೇವರಾದ ‘ನೀರ್ಥಡಿ ರಂಗನಾಥಸ್ವಾಮಿ’ ಹೆಸರಿನಲ್ಲಿಯೇ ಇದನ್ನು ಕರೆಯಲಾಗುತ್ತಿದ್ದು, ಇದರಿಂದ ‘ರಂಗಯ್ಯನ ಬಾಗಿಲು’ ಎಂದು ಹೆಸರು ಬಂದಿದೆ. 10 ಅಡಿ ಅಗಲ ಹಾಗೂ 15 ಅಡಿ ಎತ್ತರದಲ್ಲಿ ಕಮಾನಿನಾಕಾರದಲ್ಲಿ ಇದನ್ನು ನಿರ್ಮಿಸಲಾಗಿದೆ. ಕೋಟೆಯು ಸುತ್ತಲೂ 25 ಅಡಿ ಎತ್ತರ, 40 ಅಡಿ ಅಗಲವಾಗಿದ್ದು, ಮಹಾದ್ವಾರದ ನಾಲ್ಕು ದಿಕ್ಕುಗಳಲ್ಲಿ ಬತೇರಿಗಳಿವೆ. ಫಿರಂಗಿ ಮತ್ತು ಕೋವಿ ಕಿಂಡಿಗಳನ್ನು ಬಿಡಲಾಗಿದೆ.
ದ್ವಾರದ ಎರಡೂ ಕಡೆಗಳಲ್ಲಿದ್ದ ದಿಡ್ಡಿ ಬಾಗಿಲುಗಳನ್ನು ಪ್ರಸ್ತುತ ಸೀತಾರಾಮ ಮತ್ತು ಆಂಜನೇಯ ಸ್ವಾಮಿ ಮಂದಿರಗಳನ್ನಾಗಿ ಮಾಡಲಾಗಿದೆ. ದ್ವಾರದ ಎಡ-ಬಲ ಕೋಟೆ ಗೋಡೆಯ ಒಳಭಾಗದಲ್ಲಿ ಪಹರೆಯ ಎರಡು ಭಾವಡಿಗಳಿವೆ. ಕಲ್ಲು ಮತ್ತು ಗಾರೆಯಿಂದ ನಿರ್ಮಿಸಲಾದ ಈ ಕೋಟೆ ಗೋಡೆಯ ಮೇಲೆ ಕೋವಿ ಕಿಂಡಿಗಳ ರೀತಿ ಬಳಸಲು ತೆನೆಯನ್ನು ಬಿಡಲಾಗಿದ್ದು, ಪಾಳೆಯಗಾರರ ಕಾಲದಲ್ಲಿ ರಕ್ಷಣಾತ್ಮಕವಾಗಿ ಇದು ಬಹುಮುಖ್ಯವಾಗಿತ್ತು.
ಮಹಿಳೆಯರ ಸಬಲೀಕರಣದ ಸಂಕೇತವಾಗಿರುವ ‘ಗೃಹಲಕ್ಷ್ಮೀ’ ಯೋಜನೆಯ ತೃತೀಯ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಕಲ್ಲಿನ ಕೋಟೆಯ ಈ ಪಾರಂಪರಿಕ ದ್ವಾರಕ್ಕೆ ಗುಲಾಬಿ ಬೆಳಕಿನ ಸ್ಪರ್ಶ ನೀಡಿರುವುದು ಪ್ರವಾಸಿಗರು ಹಾಗೂ ಸ್ಥಳೀಯರ ಗಮನ ಸೆಳೆಯಿತು.
ಆರ್.ಶಿವಣ್ಣ ಅವರಿಂದ ಮೆಚ್ಚುಗೆ: ಸರ್ಕಾರದ ಕ್ರಮಕ್ಕೆ ಪ್ರಶಂಸೆ- ದೀಪಾಲಂಕಾರವನ್ನು ವೀಕ್ಷಿಸಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ‘ಗೃಹಲಕ್ಷ್ಮೀ’ ಯೋಜನೆಯ ಯಶಸ್ವಿ ಪಯಣದ ಸವಿನೆನಪಿಗಾಗಿ ರಾಜ್ಯದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ದೀಪಾಲಂಕಾರ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸರ್ಕಾರದ ಈ ಶ್ಲಾಘನೀಯ ಕಾರ್ಯಕ್ಕೆ ಪ್ರಶಂಸಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡು ಯಶಸ್ವಿ ಪಯಣ ಪೂರೈಸಿರುವ ಹಿನ್ನೆಲೆಯಲ್ಲಿ, 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿದ್ದ ವಾಗ್ದಾನದಂತೆ ಪ್ರತಿ ತಿಂಗಳು ‘ಗೃಹಲಕ್ಷ್ಮೀ’ ಯೋಜನೆಯಡಿ ರೂ.2,000 ತಲುಪಿಸಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಮೂರು ವರ್ಷದ ನೆನಪಿಗಾಗಿ ಚಿತ್ರದುರ್ಗದಲ್ಲೂ ರಂಗಯ್ಯನ ಬಾಗಿಲನ್ನು ಗುಲಾಬಿ ದೀಪಗಳಿಂದ ಶೃಂಗರಿಸಲಾಗಿದೆ. ಈ ಆಕರ್ಷಕ ದೀಪಾಲಂಕಾರವು ಸಾರ್ವಜನಿಕರ ಮತ್ತು ಫಲಾನುಭವಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಗ್ಯಾರಂಟಿ ಪ್ರಾಧಿಕಾರದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಪರವಾಗಿ ಆರ್.ಶಿವಣ್ಣ ಅವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ ಸೇರಿದಂತೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು, ಸದಸ್ಯರು ಇದ್ದರು.