ಪ್ರಧಾನಿ ಮೋದಿ, ಶಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸುಬ್ರಮಣಿಯನ್ ಸ್ವಾಮಿ..! ಕಾರಣ ಏನು ಗೊತ್ತಾ…?

ನವದೆಹಲಿ: ಬ್ರಿಟಿಷ್‌ ಪೌರತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ತಾವು ಮೋದಿ ಹಾಗೂ ಶಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿನ ಶನಿವಾರ ಈ ಕುರಿತು ಪೋಸ್ಟ್‌ ಹಾಕಿರುವ ಸ್ವಾಮಿ, ವಿದೇಶಿ ಪೌರತ್ವದ ಹೊರತಾಗಿಯೂ ರಾಹುಲ್ ಗಾಂಧಿ ಅವರನ್ನು ಏಕೆ ರಕ್ಷಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಮತ್ತು ಅಮಿತ್​ ಶಾ ಅವರನ್ನು ಪ್ರಶ್ನಿಸಿದ್ದಾರೆ. “ರಾಹುಲ್‌ ಗಾಂಧಿ ಅವರು 2003ರಲ್ಲಿ ಬ್ರಿಟಿಷ್‌ ಪೌರತ್ವ ಪಡೆದು ಅಲ್ಲಿ ಬ್ಯಾಕ್‌ ಆಪ್ಸ್‌ ಎಂಬ ಕಂಪನಿಯನ್ನು ಲಂಡನ್‌ನಲ್ಲಿ ಆರಂಭಿಸಿದ ಹೊರತಾಗಿಯೂ ವಿದೇಶಿ ನಾಗರಿಕರಾಗಿರುವ ರಾಹುಲ್‌ ಗಾಂಧಿ ಅವರನ್ನು ಮೋದಿ ಮತ್ತು ಶಾ ಏಕೆ ರಕ್ಷಿಸುತ್ತಿದ್ದಾರೆ? ಅವರ ಭಾರತೀಯ ಪೌರತ್ವ ಅಮಾನ್ಯವಾಗಿದೆ. ಮೋದಿ ಅವರನ್ನು ರಕ್ಷಿಸುವುದನ್ನು ಮುಂದುವರಿಸಿದರೆ, ನಾನು ಅವರ ವಿರುದ್ಧ (ಮೋದಿ, ಶಾ) ಪ್ರಕರಣ ದಾಖಲಿಸಬೇಕಾಗಬಹುದು,” ಎಂದು ಸ್ವಾಮಿ ಟ್ವೀಟ್‌ ಮಾಡಿದ್ದಾರೆ. ತಾವು 2019ರಲ್ಲಿ ರಾಹುಲ್‌ ವಿರುದ್ಧ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ ದೂರಿನ ಪ್ರತಿಯನ್ನೂ ಸ್ವಾಮಿ ಹಂಚಿಕೊಂಡಿದ್ದಾರೆ. ಈ ದೂರಿನ ಆಧಾರದಲ್ಲಿ ಆಗ ಕೇಂದ್ರ ಸರ್ಕಾರ ರಾಹುಲ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿ ಸ್ವಾಮಿ ಆರೋಪದ ಕುರಿತು ಅವರ ಪ್ರತಿಕ್ರಿಯೆ ಕೇಳಿದ್ದರು. ವರದಿಗಳ ಪ್ರಕಾರ, ಸ್ವಾಮಿ ಅವರ ದೂರಿನ ನಂತರ, ಸ್ವಾಮಿ ಮಾಡಿದ ಆರೋಪಗಳಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರವು ರಾಹುಲ್ ಗಾಂಧಿಗೆ ನೋಟಿಸ್ ನೀಡಿದೆ. ಸ್ವಾಮಿ ಅವರು 2015 ರಿಂದ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವವನ್ನು ಹಿಂಪಡೆಯಲು ಕರೆ ನೀಡುತ್ತಿದ್ದಾರೆ. 2015 ರಲ್ಲಿ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಯವರ ಪೌರತ್ವವನ್ನು ಪ್ರಶ್ನಿಸುವ ಅರ್ಜಿಯನ್ನು ವಜಾಗೊಳಿಸಿತು. ಮತ್ತೆ ಮೇ 2019 ರಲ್ಲಿ, ರಾಹುಲ್ ಗಾಂಧಿಯವರ ಪೌರತ್ವವನ್ನು ಪ್ರಶ್ನಿಸಿ ಇಬ್ಬರು ದೆಹಲಿ ನಿವಾಸಿಗಳು ಸಲ್ಲಿಸಿದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement