ಮುಂಬೈ : ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ತೆರಿಗೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಕೇಳುವುದು ಆ ರಾಜ್ಯಗಳ ಸಣ್ಣತನ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕಿಡಿಕಾರಿದ್ದಾರೆ.
ಮುಂಬೈನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಸರ್ಕಾರ 11 ವರ್ಷಗಳಿಂದ ಮಹಾಭಾರತದ ಅರ್ಜುನನಂತೆ ತನ್ನೆಲ್ಲಾ ಗುರಿಯನ್ನು ದೇಶದ ಈಶಾನ್ಯ ಹಾಗೂ ಪೂರ್ವ ರಾಜ್ಯಗಳ ಅಭಿವೃದ್ಧಿಗೆ ಮೀಸಲಿಟ್ಟಿದೆ. ಆದರೆ ದುರದೃಷ್ಟಕರ ವಿಷಯವೆಂದರೆ ಈ ಹಿಂದೆ ಅಧಿಕಾರದಲ್ಲಿದ್ದ ರಾಜ್ಯ ಸರ್ಕಾರಗಳ ಕೆಲ ನಾಯಕರು, ಕೇಂದ್ರ ಸರ್ಕಾರಕ್ಕೆ ಮುಂಬೈ ಎಷ್ಟು ತೆರಿಗೆ ಕಟ್ಟಿತು? ಮಹಾರಾಷ್ಟ್ರ ಎಷ್ಟು ತೆರಿಗೆ ಕಟ್ಟಿತು? ಎಂದು ಲೆಕ್ಕಾಚಾರ ಹಾಕಿ ಅಷ್ಟೇ ಪಾಲನ್ನು ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಆಗ್ರಹಿಸುತ್ತಿದ್ದರು ಎಂದು ಹೇಳಿದರು.
ಕೆಲ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹೆಚ್ಚು ಇಂತಹ ವಿಚಾರಗಳಿಗೆ ಸ್ಪಂದಿಸುತ್ತವೆ. ಆ ರಾಜ್ಯಗಳು ದೇಶದ ಸಮಗ್ರ ದೃಷ್ಟಿಕೋನ ಹೊಂದಿದ್ದಾರೆ. ಇನ್ನು ಕರ್ನಾಟಕ, ತಮಿಳುನಾಡು, ತೆಲಂಗಾಣದಂತ ಕೆಲ ರಾಜ್ಯಗಳು ತಾವು ಕೇಂದ್ರಕ್ಕೆ ಪಾವತಿಸಿದಷ್ಟೇ ತೆರಿಗೆ ಹಣ ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಇದಕ್ಕಿಂತ ಸಣ್ಣತನದ ಮನೋಭಾವ ಇನ್ನೊಂದಿಲ್ಲ. ಅಲ್ಲದೆ ಇದಕ್ಕಿಂತ ದುರದೃಷ್ಟಕರವಾದ ಘಟನೆ ಇನ್ನೊಂದಿಲ್ಲ ಎಂದು ದಕ್ಷಿಣದ ರಾಜ್ಯಗಳ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶ ಅಭಿವೃದ್ಧಿಯಾಗಬೇಕಾದರೆ ಈಶಾನ್ಯ ಭಾಗದ 7 ರಾಜ್ಯಗಳು ಮತ್ತು ಪೂರ್ವದ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ನಂತ ರಾಜ್ಯಗಳು ಅಭಿವೃದ್ಧಿಯಾಗಬೇಕೆಂಬುದು ಪ್ರಧಾನಿ ಮೋದಿ ಅವರ ಅಭಿಪ್ರಾಯ. ಇತರೆ ರಾಜ್ಯಗಳು ಕೂಡಾ ಇದೇ ರೀತಿಯ ಮನೋಭಾವ ಹೊಂದಿರಬೇಕು ಎಂದರು.