ಇಸ್ಲಾಮಾಬಾದ್: ರಿಯಾಸಿ ಬಸ್ ಮೇಲಿನ ದಾಳಿಯ ರೂವಾರಿ, ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬು ಕತಾಲ್ನನ್ನು ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಅಪರಿಚಿತ ದಾಳಿಕೋರರು ಹತ್ಯೆ ಮಾಡಿದ್ದಾರೆ.
ಅಬು ಕತಾಲ್ ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ಸಂಜೆ 7 ಗಂಟೆ ಸುಮಾರಿಗೆ ಝೀಲಂ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪಂಜಾಬ್ ಜಿಲ್ಲೆಯಲ್ಲಿ ಅಪರಿಚಿತ ಹಲ್ಲೆಕೋರರು ಆತನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.
ದಾಳಿಕೋರರು 15 ರಿಂದ 20 ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯಿಂದ ಅಬು ಕತಾಲ್ ಮತ್ತು ಆತನ ಓರ್ವ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಅಬು ಕತಾಲ್ಗೆ ಪಾಕ್ ಸೇನೆಯೇ ರಕ್ಷಣೆ ನೀಡಿತ್ತು. ಸರಳ ಉಡುಪಿನಲ್ಲಿ ಮಿಲಿಟರಿ ಸಿಬ್ಬಂದಿಯೇ ಈತನಿಗೆ ರಕ್ಷಣೆ ನೀಡುತ್ತಿದ್ದರು ಎನ್ನಲಾಗಿದೆ.
ಅಬು ಕತಾಲ್ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಹಫೀಜ್ ಸಯೀದ್ನ ಆಪ್ತ ಸಹಾಯಕನಾಗಿದ್ದ. ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ಈತ ಕೂಡ ಭಾಗಿಯಾಗಿದ್ದ.