ಕೊಳವೆಬಾವಿ ಕೊರೆಯಲು ನಿರಾಕ್ಷೇಪಣಾ ಪತ್ರ ಕಡ್ಡಾಯ: ಡಿ.ಸಿ

WhatsApp
Telegram
Facebook
Twitter
LinkedIn

ಬೆಂ.ಗ್ರಾ.ಜಿಲ್ಲೆ: ಮಾರ್ಚ್ 2023ರ ಅಂತ್ಯದ ಅಂತರ್ಜಲ ಮೌಲೀಕರಣದ ವರದಿಯ ಪ್ರಕಾರ ಜಿಲ್ಲೆಯಲ್ಲಿರುವ ನಾಲ್ಕು ತಾಲ್ಲೂಕುಗಳನ್ನು ಅಂತರ್ಜಲ ಅತಿ ಬಳಕೆ ತಾಲ್ಲೂಕುಗಳೆಂದು ವರ್ಗೀಕರಿಸಲಾಗಿದ್ದು ಜಿಲ್ಲೆಯಲ್ಲಿ ಪ್ರಸ್ತುತ ಇರುವ ಹಾಗೂ ಹೊಸದಾಗಿ ಪ್ರಾರಂಭಿಸುವ ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ, ಮನೋರಂಜನೆ ಉದ್ದೇಶಕ್ಕಾಗಿ ಅಂತರ್ಜಲ ಬಳಸುವವರು ಕಡ್ಡಾಯವಾಗಿ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದ್ದಾರೆ.

ಪ್ರಸ್ತುತ ಬೇಸಿಗೆ ಹನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಇದರಿಂದ ಕುಡಿಯುವ ನೀರು, ಕೃಷಿ ಕಾರ್ಯ, ದಿನ ಬಳಕೆಯ ನೀರಿನ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಹೆಚ್ಚಿನ ಕೊಳವೆ ಬಾವಿ, ಕೆರೆ, ಜಲಾಶಯಗಳು ಬತ್ತಿ ಹೋಗಿದ್ದು ಉಳಿದ ನೀರಿನ ಸಂರಕ್ಷಣೆ ಆಗಬೇಕಿದೆ. ಆದುದರಿಂದ ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ ಮನೋರಂಜನೆ ಉದ್ದೇಶಕ್ಕಾಗಿ ಅಂತರ್ಜಲ ಬಳಸುವವರು ಬಿದ್ದಂತಹ ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಕಡ್ಡಾಯವಾಗಿ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಿ ಅಂತರ್ಜಲ ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕು. ಮತ್ತೆ ಮಳೆ ಆರಂಭವಾಗುವವರೆಗೂ ನೀರನ್ನು ಮಿತವಾಗಿ ಬಳಸಿ ಅಂತರ್ಜಲ ವ್ಯರ್ಥವಾಗಿ ಪೋಲ್ ಆಗದಂತೆ ಅಗತ್ಯಕ್ಕೆ ತಕ್ಕಂತೆ ಸಾರ್ವಜನಿಕರು ಬಳಕೆ ಮಾಡಬೇಕು.

ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನುಸಾರ  ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ, ಮನೋರಂಜನೆ ಮತ್ತು ಇತರೆ ಉದ್ದೇಶಕ್ಕಾಗಿ ಕೊಳವೆಬಾವಿ ಕೊರೆಯಲು ಮತ್ತು ಕೊರೆದ ಕೊಳವೆಬಾವಿಗಳಿಂದ ಅಂತರ್ಜಲ ಬಳಸಲು ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಕೊಳವೆಬಾವಿ ಕೊರೆಯುವ ಮಾಲೀಕರು ಕಡ್ಡಾಯವಾಗಿ ತಾವು ಹೊಂದಿದ ರಿಗ್ ಯಂತ್ರಗಳನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸಿ ‘ನಮೂನೆ-7ಎ’ ಪಡೆದು ಕೊಳವೆಬಾವಿ ಕೊರೆಯಬೇಕು. ಕೊರೆದ ಕೊಳವೆಬಾವಿ ವಿಫಲವಾದರೆ ಸಂಬಂಧಪಟ್ಟ ಜಮೀನು ಮಾಲೀಕರು ಹಾಗೂ ರಿಗ್ ಮಾಲೀಕರು ವಿಫಲ ತೆರೆದ ಕೊಳವೆಬಾವಿಯನ್ನು ಸುರಕ್ಷಿತವಾಗಿ ಮುಚ್ಚಲು ಕ್ರಮಕೈಗೊಳ್ಳಬೇಕು. ಇದರಿಂದ ತೆರೆದ ವಿಫಲ ಕೊಳವೆಬಾವಿಗಳಿಗೆ ಚಿಕ್ಕ ಮಕ್ಕಳು ಬೀಳುವ ಸಂಭವ ಅಥವಾ ಇನ್ನಿತರ ಅವಘಡಗಳನ್ನು ತಪ್ಪಿಸಬಹುದು. ಇದನ್ನು ಎಲ್ಲರೂ ಗಂಭಿರವಾಗಿ ಪರಿಗಣಿಸತಕ್ಕದ್ದು.

ಕೊಳವೆಬಾವಿ ಕೊರೆಯುವ ಮುನ್ನ ಸಂಬಂಧಪಟ್ಟ ಜಮೀನು ಮಾಲೀಕರು ಕಡ್ಡಾಯವಾಗಿ ಸ್ಥಳೀಯ ಗ್ರಾಮಪಂಚಾಯತ್/ಪಟ್ಟಣ ಪಂಚಾಯತ್/ನಗರಸಭೆ/ಪುರಸಭೆಗೆ ತಿಳಿಸಿ ನಿರಾಕ್ಷೇಪಣಾ ಪತ್ರ ಪಡೆದು ನಂತರ ಜಿಲ್ಲಾ ಅಂತರ್ಜಲ ಕಛೇರಿಗೆ ಅರ್ಜಿ ಸಲ್ಲಿಸಿ ಕೊಳವೆಬಾವಿ ಕೊರೆಯಲು ನಿಯಮಾನುಸಾರ ಅನುಮತಿ ಪಡೆಯಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂತರ್ಜಲ ಕಛೇರಿ, ಅಂತರ್ಜಲ ನಿರ್ದೇಶನಾಲಯ ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon