ನವದೆಹಲಿ: ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ನೀರುಕರಡಿ ಪ್ರಯೋಗ ಪೂರ್ಣಗೊಳಿಸಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಈ ಪ್ರಯೋಗವನ್ನು ಸಿದ್ಧಪಡಿಸಿತ್ತು. ಈ ಬಗ್ಗೆ ಇಸ್ರೋ ಮಾಹಿತಿ ಹಂಚಿಕೊಂಡಿದ್ದು, ‘ಶುಭಾಂಶು ಶುಕ್ಲಾ ಐಎಸ್ಎಸ್ನಲ್ಲಿ ನೀರುಕರಡಿಗಳನ್ನು ಒಳಗೊಂಡ ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗ ಪೂರ್ಣಗೊಳಿಸಿದ್ದಾರೆ. ಅಧ್ಯಯನವು ಬಾಹ್ಯಾಕಾಶದಲ್ಲಿ ಅವುಗಳ ಬದುಕುಳಿಯುವಿಕೆ, ಪುನರುಜ್ಜಿವನ ಮತ್ತು ಸಂತಾನೋತ್ಪತ್ತಿ ಮೇಲೆ ಕೇಂದ್ರೀಕರಿಸುತ್ತದೆ. ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ ನೀರುಕರಡಿಗಳ ಜೈವಿಕ ಕಾರ್ಯವಿಧಾನಗಳ ಬಗ್ಗೆ ಅಧ್ಯಯನ ನಡೆಯಲಿದೆ ಎಂದು ತಿಳಿಸಿದೆ.
14 ದಿನಗಳ ಕಾಲ ಐಎಸ್ಎಸ್ನಲ್ಲಿ ಇರಲಿರುವ ಶುಕ್ಲಾ ಒಟ್ಟು 7 ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ. ಈ ಪೈಕಿ 4 ಪ್ರಯೋಗಗಳನ್ನು ಕರ್ನಾಟಕದ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.
ಗಗನಯಾತ್ರಿ ಶುಭಾಂಶು ಶುಕ್ಲಾ ಐಎಸ್ಎಸ್ನ ಕಿಟಕಿ ಎಂದೇ ಕರೆಯಲಾಗುವ ‘ಕಪೋಲಾ’ ರಂಧ್ರದಿಂದ ಹೊರ ಪ್ರಪಂಚವನ್ನು ವೀಕ್ಷಿಸುತ್ತಿರುವ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ.