ನವದೆಹಲಿ : ತಮ್ಮ ವಿರುದ್ಧದ ಆತಂರಿಕ ತನಿಖೆ ವರದಿಯನ್ನು ಪ್ರಶ್ನಿಸಿ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.
ನ್ಯಾ.ದೀಪಂಕರ್ ದತ್ತ ಮತ್ತು ಎ.ಜಿ.ಮಸಿಹ್ ಅವರ ಪೀಠವು ಆಂತರಿಕ ಸಮಿತಿಯ ರಚನೆ ಮತ್ತು ವಿಚಾರಣಾ ಕಾರ್ಯವಿಧಾನವು ಕಾನೂನು ಬಾಹಿರವಲ್ಲ ಎಂದು ಹೇಳಿದೆ.
ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಹುದ್ದೆಯಿಂದ ತೆಗೆದುಹಾಕುವಂತೆ ಶಿಫಾರಸು ಮಾಡಿದ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಸಮಿತಿಯ ಶಿಫಾರಸನ್ನು ಪ್ರಶ್ನಿಸಿ ವರ್ಮಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಈ ಬಗ್ಗೆ ಇಂದು ತೀರ್ಪು ನೀಡಿದ ಕೋರ್ಟ್, ಈ ಪ್ರಕರಣದಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ ಪತ್ರವು ಸಂವಿಧಾನಬಾಹಿರವಲ್ಲ ಎಂದು ಒಪ್ಪಿಕೊಂಡಿದೆ. ನ್ಯಾಯಾಲಯವು ಆಂತರಿಕ ತನಿಖಾ ಪ್ರಕ್ರಿಯೆಯನ್ನು ನಿಯಮಗಳ ಪ್ರಕಾರವೇ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಾಧೀಶರಿಗೆ ಕೇವಲ ಹೆಸರಿಗೆ ಮಾತ್ರ ಹುದ್ದೆಯಲ್ಲ. ಅವರು ದೇಶ ಮತ್ತು ನ್ಯಾಯಾಂಗದ ಬಗ್ಗೆ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಅವರು ಕೇವಲ ಅಂಚೆ ಕಚೇರಿಯಂತೆ ಕೆಲಸ ಮಾಡಲು ಸಾಧ್ಯವಿಲ್ಲ. ನ್ಯಾಯಮೂರ್ತಿ ವರ್ಮಾ ಅವರ ನಡವಳಿಕೆ ನ್ಯಾಯಾಂಗದ ಘನತೆಗೆ ಅನುಗುಣವಾಗಿಲ್ಲ. ಅವರ ವಿರುದ್ಧ ತೆಗೆದುಕೊಂಡ ತನಿಖೆ ಮತ್ತು ಕ್ರಮ ಸರಿಯಾಗಿದೆ ಎಂದು ಕೋರ್ಟ್ ತಿಳಿಸಿದೆ.