2028ಕ್ಕೆ ನಾನೇ ಕರ್ನಾಟಕದ ಮುಖ್ಯಮಂತ್ರಿಯಾಗುವೆ. ಆಗ ಗಣೇಶನ ವಿಗ್ರಹದ ಮೇಲೆ ಕಲ್ಲು ಹೊಡೆದವರ ಮನೆಗಳ ಮೇಲೆ ಬುಲ್ಡೋಜರ್ ಹರಿಸುವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದರು.
ತಾಲೂಕಿನ ಕವರನಹಳ್ಳಿಯಲ್ಲಿ ನಡೆದ ಗೋದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಸರಕಾರ ತೆಗೆದು ಕೊಂಡು ಬರುತ್ತೇನೆ. ವಿಧಾನಸೌಧದ ಮುಂದೆ ಜೆಸಿಬಿ ನಿಲ್ಲಿಸುತ್ತೇನೆ. ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಿದವರ ಮನೆಗಳು ಢಮಾರ್ ಎಂದು ಹೇಳಿದರು.
ನನ್ನ ಮೇಲೆ 72 ಪ್ರಕರಣಗಳನ್ನು ದಾಖಲಿಸಿದ್ದಾರೆ. ನಾನು ದೇಶ, ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಿದ್ದೇನೆ. ಯತ್ನಾಳ್ ಕೆಟ್ಟ ಕೆಲಸ ಮಾಡುವುದಿಲ್ಲ. ದೇಶ ಮತ್ತು ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಾನೆ ಎಂದು ನ್ಯಾಯಾಲಯಗಳಿಗೂ ಗೊತ್ತು. ನ್ಯಾಯಾಲಯಗಳು ಇಲ್ಲದಿದ್ದರೆ ನಾವು ಕಾಯಂ ಜೈಲಿನಲ್ಲಿಯೇ ಇರಬೇಕಾಗಿತ್ತು ಎಂದರು. ಗೋ ಸಂಪತ್ತು ರಕ್ಷಿಸಬೇಕು ಎಂದು ಸಂವಿಧಾನದಲ್ಲಿ ಸೇರಿಸಿದವರು ಅಂಬೇಡ್ಕರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲ ಪತ್ರಿಯ ಮುಖಪುಟದಲ್ಲಿ ರಾಮ, ಲಕ್ಷ್ಮಣ, ಸೀತೆ ಹನುಮ ಇದ್ದಾರೆ. ಗೋರಕ್ಷಣೆ ಮಾಡಬೇಕು ಎನ್ನುವುದನ್ನು ನಮ್ಮ ಸನಾತನ ಧರ್ಮ ಹೇಳುತ್ತದೆ. ಆದರೆ ನಮ್ಮ ದೇಶದಲ್ಲಿ ಗೋ ಹಂತಕರ ಸರಕಾರಗಳು, ಸ್ವಾಮೀಜಿ ಗಳನ್ನು ಅಪಮಾನಿಸುವ ಸರಕಾರಗಳು ಬರುತ್ತಿವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.