ಕಲಬುರಗಿ: ಸಹೋದರಿಗೆ ಮರ್ಯಾದೆ ಹತ್ಯೆಗೈದ ಇಬ್ಬರು ಸಹೋದರರಿಗೆ ಕರ್ನಾಟಕ ಹೈಕೋರ್ಟ್ ಪೀಠ ಮರಣ ದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಅದಲ್ಲದೇ ಸಹೋದರರ ಕುಟುಂಬದ ಇನ್ನೂ ಐವರಿಗೆ ಜೀವಾವಧಿ ಶಿಕ್ಷೆ ಸಹ ವಿಧಿಸಲಾಗಿದೆ. ಇಲ್ಲಿನ ಕಲ್ಬುರ್ಗಿ ಹೈಕೋರ್ಟ್ ದ್ವಿ ಸದಸ್ಯಪೀಠದಿಂದ ಮಹತ್ವದ ತೀರ್ಪು ನೀಡಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕನಲ್ ಗ್ರಾಮದ ಇಬ್ರಾಹಿಂ ಸಾಬ್ (31) ಹಾಗೂ ಈತನ ಸಹೋದರ ಲಾರಿ ಚಾಲಕ ಅಕ್ಟರ್ (28) ಮರಣ ದಂಡನೆ ಶಿಕ್ಷೆಗೋಳಗದವರು
ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎನ್ನುವ ಕಾರಣಕ್ಕೆ ತಮ್ಮ ತಂಗಿಯನ್ನೇ ಬೆಂಕಿ ಹಚ್ಚಿ ಜೀವಂತವಾಗಿ ಸಹೋದರರು ಸುಟ್ಟು ಹಾಕಿದ್ದರು.
ಸೈಬಣ್ಣ ಎನ್ನುವ ದಲಿತ ಯುವಕನ ಜೊತೆ ಬಾನು ಬೇಗಂ ಪ್ರೀತಿಸಿ ಮದುವೆಯಾಗಿದ್ದಳು. ಬಾನು ಬೇಗಂ ಒಂಬತ್ತು ತಿಂಗಳ ತುಂಬು ಗರ್ಭಿಣಿ ಯಾಗಿದ್ದ ಸಂರ್ಭದಲ್ಲಿ ಆಕೆಯ ಸಹೋದರರೇ ಬೆಂಕಿ ಹಚ್ಚಿ ಸಜೀವವಾಗಿ ಕೊಂದು ಹಾಕಿದ್ದರು.
2017 ರಲ್ಲಿ ನಡೆದ ಕೊಲೆ ಪ್ರಕರಣದ ಬಗ್ಗೆ ಬಸವನಬಾಗೇವಾಡಿ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ (ಚಾರ್ಜರ್) ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ಕೋರ್ಟ್ ಈ ಇಬ್ಬರು ಸಹೋದರರಿಗೆ ಮರಣದಂಡನ ಶಿಕ್ಷೆ ಹಾಗೂ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಕಲ್ಬುರ್ಗಿ ಹೈಕೋರ್ಟ್ ದ್ವಿ ಸದಸ್ಯ ಪೀಠ ಈ ತೀರ್ಪುನ್ನು ಮಾನ್ಯ ಮಾಡಿದೆ.
ಕೊಲೆಯಾದ ಬಾನು ಬೇಗಂನ ತಾಯಿ ಸೇರಿ ಕುಟುಂಬದ ಒಟ್ಟಾರೆ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಸರ್ಕಾರಿ ಅಭಿಯೋಜಕ ಸಿದ್ದಲಿಂಗ ಪಾಟೀಲ್ ತೀರ್ಪಿನ ವಿವರ ನೀಡಿದರು.