ಇಂದು ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ವಿಶೇಷ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಯಲಿದ್ದು, ಎಲ್ಲರ ಚಿತ್ತ ಅತ್ತ ಗಮನ ನೆಟ್ಟಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ನಿವಾಸಕ್ಕೆ ಬ್ರೇಕ್ಫಾಸ್ಟ್ಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಹ್ವಾನ ನೀಡಿದ್ದಾರೆ. ಆಹ್ವಾನಕ್ಕೆ ಸಿಎಂ ನಗುಮುಖದಿಂದ ಸಮ್ಮತಿ ಸೂಚಿಸಿದರು. ಏನಯ್ಯ ನಾಳೆ ಏನು ತಿಂಡಿ ಮಾಡಿಸುತ್ತಿದ್ದೀಯಾ ಎಂದು ಸಿಎಂ ಈ ವೇಳೆ ಕೇಳಿದರು. ಇದಕ್ಕೆ ಉತ್ತರಿಸಿದ ಡಿಸಿಎಂ ನಿಮಗೆ ಇಷ್ಟವಾದದ್ದನ್ನೇ ಮಾಡಿಸುತ್ತೇನೆ ಎಂದು ನಕ್ಕರು. ಆಗಲಿ ಎಂದು ಸಿಎಂ ನಗುಮುಖ ತೋರಿದರು.
ಇನ್ನು ಡಿಸಿಎಂ ಡಿಕೆಶಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೌದು ಹೋಗ್ತಿನಿ, ನಾಳೆ 9.30 ಕ್ಕೆ ಹೋಗ್ತಿನಿ ಎಂದು ಸ್ಪಷ್ಟಪಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆಯ ಬ್ರೇಕ್ಫಾಸ್ಟ್ಗಾಗಿ ವಿಶೇಷ ಮೆನು ಸಿದ್ಧಪಡಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಸಿಎಂಗೆ ಅತ್ಯಂತ ಇಷ್ಟವಾದ ನಾಟಿ ಕೋಳಿ ಸಾಂಬಾರ್, ಇಡ್ಲಿ ಮತ್ತು ನಾಟಿ ಕೋಳಿ ಪ್ರೈ ಮೆನು ಪಟ್ಟಿಯಲ್ಲಿ ಸೇರಿಸಲ್ಪಟ್ಟಿವೆ.
ಈ ಬ್ರೇಕ್ಫಾಸ್ಟ್ ಮೀಟಿಂಗ್ ಅನ್ನು ಕೇವಲ ಆಹಾರಕ್ಕಾಗಿ ಮಾತ್ರವಲ್ಲ, ರಾಜಕೀಯ ತಂತ್ರ, ಆಡಳಿತದ ಚರ್ಚೆ ಮತ್ತು ಪರಸ್ಪರ ನಂಬಿಕೆಯ ಬಲವರ್ಧನೆಗೆ ವೇದಿಕೆಯಾಗಿದೆ.
































