ಅಹಮದಾಬಾದ್ : ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸುವ ಬಗ್ಗೆ ದಂಪತಿ ನಡುವೆ ಉಂಟಾದ ಜಗಳದಿಂದಾಗಿ 11 ವರ್ಷದ ದಾಂಪತ್ಯ ಜೀವನ ವಿಚ್ಛೇದನದೊಂದಿಗೆ ಅಂತ್ಯಗೊಂಡಿದೆ.
ಈ ಈರುಳ್ಳಿ – ಬೆಳ್ಳುಳ್ಳಿ ಬಳಸುವ ವಿವಾದದಿಂದಾಗಿ 11 ವರ್ಷದ ದಾಂಪತ್ಯವೇ ಅಂತ್ಯಗೊಂಡ ಘಟನೆ ಅಹಮದಾಬಾದಿನಲ್ಲಿ ನಡೆದಿದೆ. ಪತ್ನಿ ಕೂಡಲೇ ಮಗುವಿನೊಂದಿಗೆ ಮನೆಬಿಟ್ಟು ಹೊರಟು ಹೋಗಿದ್ದಳು, ಪತಿ ಬಳಿಕ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವು ಗುಜರಾತ್ ಹೈಕೋರ್ಟ್ ಮಟ್ಟಿಲೇರಿತ್ತು. ಅಲ್ಲಿ ನ್ಯಾಯಾಲಯವು ವಿಚ್ಛೇದನವನ್ನು ಪ್ರಶ್ನಿಸಿ ಪತ್ನಿಯ ಮೇಲ್ಮನವಿಯನ್ನು ವಜಾಗೊಳಿಸಿತು.
ಈ ದಂಪತಿ 2002ರಲ್ಲಿ ವಿವಾಹವಾಗಿದ್ದರು. ಪತ್ನಿ ಸ್ವಾಮಿನಾರಾಯಣ ಪಂಥದ ಅನುಯಾಯಿಯಾಗಿದ್ದಳು. ಆದ್ದರಿಂದ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಲು ಬಿಡುತ್ತಿರಲಿಲ್ಲ. ಆದರೆ ಪತಿ ಹಾಗೂ ಅತ್ತೆಗೆ ಆಕೆಯ ಈ ಪದ್ಧತಿ ಇಷ್ಟವಾಗುತ್ತಿರಲಿಲ್ಲ. ಇದರಿಂದ ಜಗಳ, ವಿವಾದ ಹೆಚ್ಚಾಗಿ ಇಬ್ಬರ ಸಂಬಂಧ ಹದಗೆಟ್ಟಿತ್ತು.
ಸ್ವಾಮಿನಾರಾಯಣ ಪಂಥದ ನಿಯಮಗಳನ್ನು ಪಾಲಿಸುತ್ತಿದ್ದ ಪತ್ನಿ ನಿಯಮಿತವಾಗಿ ದೇವಸ್ಥಾನಗಳಲ್ಲಿ ಪ್ರಾರ್ಥನೆಗಳು ಮತ್ತು ಧಾರ್ಮಿಕ ಆಚರಣೆಗಳಿಗೆ ಹಾಜರಾಗುತ್ತಿದ್ದರು. ಆಕೆಯ ಪತಿ ಮತ್ತು ಅತ್ತೆ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಲು ಇಷ್ಟವಿರಲಿಲ್ಲ, ಹೀಗಾಗಿ ಮನೆಯಲ್ಲಿ ಪ್ರತ್ಯೇಕ ಅಡುಗೆ ಮಾಡಲಾಗುತ್ತಿತ್ತು.
2013 ರಲ್ಲಿ, ಪತಿ ಅಹಮದಾಬಾದ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆಹಾರದ ವಿಷಯದಲ್ಲಿ ತನ್ನ ಹೆಂಡತಿ ತನ್ನ ಬಳಿ ಕ್ರೂರವಾಗಿ ವರ್ತಿಸಿ ನಂತರ ತನ್ನನ್ನು ಬಿಟ್ಟುಹೋಗಿದ್ದಾಳೆ ಎಂದು ಆರೋಪಿಸಿದ್ದರು. 2024 ರಲ್ಲಿ, ಕೌಟುಂಬಿಕ ನ್ಯಾಯಾಲಯವು ಅವರಿಗೆ ವಿಚ್ಛೇದನವನ್ನು ನೀಡಿ, ಪತ್ನಿಗೆ ಜೀವನಾಂಶ ನೀಡುವಂತೆ ತೀರ್ಪು ನೀಡಿತ್ತು.
ಬಳಿಕ ದಂಪತಿ ಹೈಕೋರ್ಟ್ ಮೊರೆಹೋದರು. ಅರ್ಜಿ ವಿಚಾರಣೆ ವೇಳೆ ಪತ್ನಿಯ ಧಾರ್ಮಿಕ ನಂಬಿಕೆಗಳಿಂದಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಪ್ಪಿಸುವ ಅಭ್ಯಾಸವು ಜಗಳಗಳಿಗೆ ಕಾರಣವಾಗುತ್ತಿದೆ ಎಂದು ಪತಿ ಕುಟುಂಬ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದು, ಆಕೆ ಬದಲಾಗಲು ಸಿದ್ಧಳಿಲ್ಲ ಎಂದು ಮಹಿಳೆ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದರು. ಈ ವಿಚ್ಛೇದನದ ಕಾನೂನು ಪ್ರಕ್ರಿಯೆಯು ಸುಮಾರು 12 ವರ್ಷಗಳ ಕಾಲ ನಡೆಯಿತು.





























