ದಾವಣಗೆರೆ:: ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿ ಸುಪ್ರೀಂಕೊರ್ಟ್ ಪ್ರಕರಣವನ್ನು ಸಮಾಧಾನ ಸಮರೋಹದಡಿ ರಾಜಿ ಸಂಧಾನದ ಮೂಲಕ ಶನಿವಾರ ಅಪಘಾತ ಪ್ರಕರಣವೊಂದನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ಡಿ.ಕೆ ಅವರು ತಿಳಿಸಿದರು.
ಅವರು ಶನಿವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಚೇರಿಯಲ್ಲಿ ಪ್ರಕರಣ ಇತ್ಯರ್ಥದ ಬಗ್ಗೆ ಅನುಸರಿಸಿದ ಕ್ರಮಗಳನ್ನು ವಿವರಿಸಿದರು.
ಭಾರತದ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ, ರಾಜಿ ಮಾಡಿಕೊಳ್ಳಲು ಯೋಗ್ಯವಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಲುವಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಮಾಧಾನ ಸಮಾರೋಹ’ ಎಂಬ ವಿಶೇಷ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ, ಭಾರತದ ಸುಪ್ರೀಂ ಕೋರ್ಟ್ನಲ್ಲಿ 2026 ರ ಆಗಸ್ಟ್ 21, 22 ಮತ್ತು 23 ರಂದು ವಿಶೇಷ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ನಿಂದ ಬಂದಿರುವ ನಿರ್ದೇಶನದಂತೆ, ದಾವಣಗೆರೆ ಜಿಲ್ಲೆಗೆ ಸಂಬಂಧಪಟ್ಟ ಒಟ್ಟು 30 ಪ್ರಕರಣಗಳನ್ನು ಈ ವಿಶೇಷ ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಈ ಪ್ರಕರಣಗಳ ಎರಡೂ ಕಡೆಯ ಕಕ್ಷಿದಾರರಿಗೆ (ಪಾರ್ಟಿಗಳಿಗೆ) ಈಗಾಗಲೇ ಪ್ರಾಧಿಕಾರದ ವತಿಯಿಂದ ನೋಟಿಸ್ಗಳನ್ನು ಜಾರಿಗೊಳಿಸಲಾಗುತ್ತಿದೆ. ಕಕ್ಷಿದಾರರು ತಾಲೂಕುಗಳಲ್ಲಿದ್ದರೆ ಆಯಾ ತಾಲೂಕು ಕಾನೂನು ಸೇವಾ ಸಮಿತಿಗಳ ಮೂಲಕ, ದಾವಣಗೆರೆ ಜಿಲ್ಲೆಯಲ್ಲಿದ್ದರೆ ಜಿಲ್ಲಾ ಪ್ರಾಧಿಕಾರದ ಮೂಲಕ, ಒಂದು ವೇಳೆ ಕಕ್ಷಿದಾರರು ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿದ್ದರೆ, ಆಯಾ ವ್ಯಾಪ್ತಿಯ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನೋಟಿಸ್ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ , ಕಕ್ಷಿದಾರರು ಅದಾಲತ್ಗೆ ಖುದ್ದಾಗಿ ಭೇಟಿ ನೀಡಲು ಸಾಧ್ಯವಾಗದಿದ್ದಲ್ಲಿ, ಅವರಿಗಾಗಿ ವಿಡಿಯೋ ಕಾನ್ಫರೆನ್ಸ್ (VC Link) ಮೂಲಕ ಭಾಗವಹಿಸಲು ವಿಶೇಷ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಅದಾಲತ್ಗಿಂತ ಮುಂಚಿತವಾಗಿ ಪ್ರಕರಣಗಳ ಸುಲಭ ಇತ್ಯರ್ಥಕ್ಕಾಗಿ ಪೂರ್ವ ಸಂಧಾನ ಸಭೆಗಳನ್ನು ನಡೆಸಲಾಗುತ್ತದೆ. ಈ ಸಂಧಾನ ಪ್ರಕ್ರಿಯೆಯಲ್ಲಿ ಕಕ್ಷಿದಾರರು ಭಾಗವಹಿಸುವುದು ಕಡ್ಡಾಯವಾಗಿದೆ.
ಸಭೆಗಳ ಮೇಲ್ವಿಚಾರಣೆ ಹಾಗೂ ಸಂಧಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲು ಇಬ್ಬರು ಗೌರವಾನ್ವಿತ ನ್ಯಾಯಾಧೀಶರು ಹಾಗೂ ಒಬ್ಬರು ಮಧ್ಯಸ್ಥಗಾರರ ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ. ಸಾರ್ವಜನಿಕರು ಹಾಗೂ ಕಕ್ಷಿದಾರರು ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಂಡು, ತಮ್ಮ ಸುಪ್ರೀಂ ಕೋರ್ಟ್ನ ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶಾಂತಯುತವಾಗಿ ಮತ್ತು ಶೀಘ್ರವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಮುಂಬರಲಿರುವ ವಿಶೇಷ ಲೋಕ ಅದಾಲತ್ ಗಿಂತ ಮುಂಚಿತವಾಗಿ, ದಾವಣಗೆರೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ರಾಜೀ ಸಂಧಾನ (Pre-conciliation) ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ಜರುಗಿದೆ. ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಮಾನ್ಯ ಶ್ರೀ ರವಿ ಹೊಸಮನಿ ಅವರ ವರ್ಚುವಲ್ (VC) ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ನಡೆದ ಸಂಧಾನದಲ್ಲಿ ದೀರ್ಘಕಾಲದ ಅಪಘಾತ ವಿಮಾ ಪರಿಹಾರದ ಪ್ರಕರಣವೊಂದು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ ಎಂದರು.
ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಹಂತದಲ್ಲಿದ್ದ ಅಪಘಾತ ಪರಿಹಾರ ಕ್ಲೈಮ್ ಪ್ರಕರಣವೊಂದು ಈ ಸಂಧಾನದ ಮೂಲಕ ಯಶಸ್ವಿ ತೀರ್ಮಾನ ಕಂಡಿದೆ. ದಾವಣಗೆರೆ ನ್ಯಾಯಾಲಯದಲ್ಲಿ ಎಂವಿಸಿ ಸಂಖ್ಯೆ 856/2016 ರಡಿ ದಾಖಲಾಗಿದ್ದ ಪ್ರಕರಣ ಇದಾಗಿದ್ದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ರೂ. 875029 ಪರಿಹಾರ ನೀಡಲಾಗಿತ್ತು, ನಂತರ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ರೂ. 4,53,473 ಹೆಚ್ಚುವರಿ ಪರಿಹಾರವನ್ನು ನೀಡಿ ಆದೇಶಿಸಿತ್ತು. ಸದರಿ ಪರಿಹಾರದ ಮೊತ್ತ ಸಾಲದೆಂದು ಕಕ್ಷಿದಾರರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಈ ಪ್ರಕರಣವು ಎಸ್.ಎಲ್.ಪಿ ಸಂಖ್ಯೆ: 8750/2024 ರಡಿ ದಾಖಲಾಗಿತ್ತು ಎಂದರು.
ಪ್ರಸ್ತುತ ನಡೆದ ಪೂರ್ವ ಸಂಧಾನ ಸಭೆಯಲ್ಲಿ ಇನ್ಶೂರೆನ್ಸ್ ಕಂಪನಿ ಹಾಗೂ ಕಕ್ಷಿದಾರರ ನಡುವೆ ಸಮಾಲೋಚನೆ ನಡೆಸಿ, ಹೈಕೋರ್ಟ್ ನೀಡಿದ್ದ ಮೊತ್ತವನ್ನು ಪರಿಷ್ಕರಿಸಿ ಒಟ್ಟು ರೂ. 6,00,000 (ಆರು ಲಕ್ಷ ರೂಪಾಯಿಗಳು) ಹೆಚ್ಚುವರಿ ಪರಿಹಾರ ನೀಡಲು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಮಾನ್ಯ ಶ್ರೀ ರವಿ ಹೊಸಮನಿ ಅವರ ಒಪ್ಪಿಸಿದ್ದಾರೆ ಎಂದು ತಿಳಿಸಿದರು.
ಸಂಧಾನದ ತೀರ್ಮಾನದಂತೆ ಒಪ್ಪಿಗೆಯಾಗಿರುವ ಈ ರೂ. 6 ಲಕ್ಷ ಹೆಚ್ಚುವರಿ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ವಿಮಾ ಕಂಪನಿಯು ಮುಂಬರುವ ಆಗಸ್ಟ್ ತಿಂಗಳ ನಂತರ ನ್ಯಾಯಾಲಯದಲ್ಲಿ ಡೆಪಾಸಿಟ್ ಮಾಡಲಿದೆ, ಈ ಸಮಾಧಾನ ಸಮಾರೋಪ ಮಾದರಿಯ ಸಂಧಾನ ಪ್ರಕ್ರಿಯೆಯು ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಕೋರ್ಟ್ ಅಲೆಯುವ ಸಮಯ ಮತ್ತು ವೆಚ್ಚವನ್ನು ಉಳಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.
ವಿಶೇಷ ಲೋಕ ಅದಾಲತ್: ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಪಾರ್ಟಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆಯೋ, ಅವರು ಆದಷ್ಟು ಬೇಗ ಸ್ಪಂದಿಸಬೇಕು ಎಂದು ತಿಳಿಸಿದರು.






























