ಚಿತ್ರದುರ್ಗ: ಅಧಿಕಾರ ಇಂದು ಇರುತ್ತದೆ, ನಾಳೆ ಹೋಗಬಹುದು. ಆದರೆ ಜನರಿಗಾಗಿ ಮಾಡುವ ಅಭಿವೃದ್ಧಿ ಕೆಲಸ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಇದೇ ನನ್ನ ರಾಜಕೀಯ ಜೀವನದ ಮೂಲ ಸಿದ್ಧಾಂತವಾಗಿದೆ. ಅಧಿಕಾರವನ್ನು ಪ್ರತಿಷ್ಠೆಗಾಗಿ ಅಲ್ಲ, ಜನಸೇವೆಗೆ ಬಳಸಬೇಕೆಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು.
ತಾಲೂಕಿನ ಕಳ್ಳಿಹಟ್ಟಿ ಗೊಲ್ಲರಹಟ್ಟಿ, ಬರಗೇರಮ್ಮ ದೇವಸ್ಥಾನ, ಚೋಳಗುಡ್ಡ ಗ್ರಾಮದ ವ್ಯಾಪ್ತಿಗಳಲ್ಲಿ ಮಂಗಳವಾರ 2024-25ನೇ ಸಾಲಿನ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಡಿ ಸುಮಾರು 85 ಲಕ್ಷ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು, ಕ್ಷೇತ್ರದ ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಯಾವುದೇ ರೀತಿಯ ಕಪ್ಪು ಚುಕ್ಕಿ ಇಲ್ಲದ ಆಡಳಿತದ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತಿದ್ದೇನೆ ಎಂದು ಹೇಳಿದರು.
ಅಧಿಕಾರ ಎಷ್ಟೇ ದೊಡ್ಡದಾಗಿದ್ದರೂ ಅದು ಶಾಶ್ವತವಲ್ಲ. ಆದರೆ ಜನರಿಗೆ ಅನುಕೂಲವಾಗುವ ರಸ್ತೆ, ಶಾಲೆ, ಕುಡಿಯುವ ನೀರಿನ ಯೋಜನೆ, ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳು ಹಲವು ವರ್ಷಗಳವರೆಗೆ ಜನರಿಗೆ ಸೇವೆ ಸಲ್ಲಿಸುತ್ತವೆ. ಆದ್ದರಿಂದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಯ ಕ್ಷೇತ್ರವನ್ನಾಗಿ ರೂಪಿಸುವ ಉದ್ದೇಶದಿಂದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಮಾನವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣ, ಚರಂಡಿ ವ್ಯವಸ್ಥೆ ಸುಧಾರಣೆ, ಬೀದಿ ದೀಪಗಳ ಅಳವಡಿಕೆ, ಸಿಸಿ ರಸ್ತೆಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ದೇವಸ್ಥಾನ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಹೇಳಿದರು.
ಪ್ರತಿ ಗ್ರಾಮಕ್ಕೂ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಿಸಿ ರಸ್ತೆ, ಹೈಮಾಸ್ಟ್ ಹಾಗೂ ಎಲ್ಇಡಿ ಬೀದಿ ದೀಪಗಳು, ಚರಂಡಿ ಕಾಮಗಾರಿಗಳು, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶದ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂಬುದು ಸರ್ಕಾರ ಮತ್ತು ತಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಇನ್ನೂ ಕ್ಷೇತ್ರದ ಯುವಕರಿಗೆ ಕ್ರೀಡಾ ಸೌಲಭ್ಯ, ಮಹಿಳೆಯರಿಗೆ ಸಮುದಾಯ ಭವನ, ರೈತರಿಗೆ ಅಗತ್ಯ ಮೂಲಸೌಕರ್ಯ, ಶಾಲೆಗಳ ಅಭಿವೃದ್ಧಿ, ಆರೋಗ್ಯ ಸೇವೆಗಳ ಸುಧಾರಣೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಹುಲ್ಲೂರು ಕೆರೆಗೆ ನೀರು ತುಂಬಿಸುವ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಶಾಶ್ವತ ನೀರಿನ ಭದ್ರತೆ ದೊರೆಯಲಿದ್ದು, ಕೃಷಿ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಲಿದೆ. ಮಳೆ ಕೊರತೆಯಿಂದ ಪ್ರತಿವರ್ಷ ಎದುರಾಗುವ ನೀರಿನ ಸಮಸ್ಯೆಗೆ ಈ ಯೋಜನೆ ಪರಿಣಾಮಕಾರಿ ಪರಿಹಾರವಾಗಲಿದೆ.
ಕೆರೆಯಲ್ಲಿ ವರ್ಷಪೂರ್ತಿ ನೀರು ಸಂಗ್ರಹವಾಗುವುದರಿAದ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಳವಾಗುತ್ತದೆ. ಇದರಿಂದ ರೈತರ ಕೃಷಿ ಬಾವಿಗಳು ಮತ್ತು ಕೊಳವೆಬಾವಿಗಳಿಗೆ ಸಮರ್ಪಕವಾಗಿ ನೀರು ದೊರೆತು, ಬೇಸಿಗೆ ಸಂದರ್ಭದಲ್ಲಿಯೂ ನೀರಿನ ಲಭ್ಯತೆ ಸುಧಾರಿಸುತ್ತದೆ. ತೋಟಗಾರಿಕೆ ಬೆಳೆಗಳು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಉತ್ಪಾದನೆ ಹೆಚ್ಚಾಗಿ ರೈತರ ಆದಾಯ ವೃದ್ಧಿಯಾಗುವ ಜೊತೆಗೆ ಕೃಷಿಯ ಮೇಲಿನ ವಿಶ್ವಾಸವೂ ಹೆಚ್ಚಲಿದೆ.
ಒಟ್ಟಾರೆ, ಹುಲ್ಲೂರು ಕೆರೆಗೆ ನೀರು ತುಂಬಿಸುವ ಯೋಜನೆ ಕೇವಲ ಒಂದು ನೀರಾವರಿ ಯೋಜನೆಯಲ್ಲ; ರೈತರ ಆರ್ಥಿಕ ಅಭಿವೃದ್ಧಿ, ಗ್ರಾಮೀಣ ಸಮೃದ್ಧಿ, ಅಂತರ್ಜಲ ವೃದ್ಧಿ ಹಾಗೂ ಕೃಷಿ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ಮಹತ್ವದ ಹೆಜ್ಜೆಯಾಗಿದ್ದು, ಈ ಯೋಜನೆ ಯಶಸ್ವಿಯಾದರೆ ಚಿತ್ರದುರ್ಗ ಭಾಗದ ರೈತರ ಬದುಕಿನಲ್ಲಿ ಮಹತ್ತರ ಬದಲಾವಣೆ ತರಲಿದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷರಾದ ಶಿವಣ್ಣ ಮಾತನಾಡಿ ಶಾಸಕರು ಹೇಳಿದಂತೆ ನುಡಿದಿದ್ದಾರೆ ಕಳೆದ ದೇವಸ್ಥಾನದ ಕಳಸರೋಹಣ ಕಾರ್ಯಕ್ರಮಕ್ಕೆ ಆಗಮಿಸಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನವನ್ನು ನೀಡುತ್ತೇನೆ ಎಂದು ಹೇಳಿದರು ಆ ಒಂದು ಮಾತಿನ ಪ್ರಕಾರ ದೇವಸ್ಥಾನದ ಭವನದ ಭೂಮಿ ಪೂಜೆಗೆ ಬಂದಿರುವುದು ಅತ್ಯಂತ ಸಂತಸದ ವಿಚಾರವಾಗಿದೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳ ಸಮಸ್ಯೆಗಳ ಪಟ್ಟಿಯನ್ನು ಆಲಿಸಿ ಶಾಸಕರು ಕಾರ್ಯಕ್ಷಮತೆಯಾಗಿ ಕ್ಷೇತ್ರದಲ್ಲೆಡೆ ಅಭಿವೃದ್ಧಿ ಕೆಲಸಗಳ ಪೂಜೆಯನ್ನು ನೆರವೇರಿಸುತ್ತಿದ್ದಾರೆ. ಜನರಿಗೆ ಬೇಕಾಗಿರುವಂತ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆಯನ್ನು ನೀಡುತ್ತಾ ಕ್ಷೇತ್ರದಲ್ಲಿಡೆ ಕೆಲಸ ಮಾಡುತ್ತಿದ್ದಾರೆ, ಶಾಸಕರು ಸರ್ಕಾರದಿಂದ ವಿಶೇಷ ಅನುದಾನಗಳನ್ನು ತಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಯ ಕಡೆಗೆ ಕೊಂಡಯಬೇಕೆAದು ತಿಳಿಸಿದರು.
2024-25 ಸಾಲಿನ ಕರ್ನಾಟಕ ಶಾಸಕರ ಸ್ಥಳೀಯ ಪ್ರಾದೇಶಿಕ ಅಭಿವೃದ್ಧಿ ಅನುದಾನದ ಅಡಿಯಲ್ಲಿ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಶ್ರೀ ಬರಗೇರಮ್ಮ ದೇವಿ ದೇವಸ್ಥಾನದ 10 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಮತ್ತು ಚಿತ್ರದುರ್ಗ ನಗರದ ತಾಜ್ ಪೀರ್ ಮನೆ ಹತ್ತಿರ ಪೀರ್ ಸಾಬ್ ಕಾಂಪೌAಡ್ ನಿಂದ ಶಾಲೆವರೆಗೆ ಹಾಗೂ ಮೇದಾರ ಮಠದವರೆಗೆ 50 ಲಕ್ಷ ವೆಚ್ಚದ ರಸ್ತೆ ಹಾಗೂ ಕಳ್ಳಿಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಶ್ರೀ ದೋಮಪ್ಪ ಸ್ವಾಮಿ, ಶ್ರೀ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಕುಕ್ಕವಾಡೇಶ್ವರಿ ದೇವಿ ದೇವಸ್ಥಾನದ 25 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ರದುರ್ಗ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ ಪೀರ್, ಚಿತ್ರದುರ್ಗ ಬಿಇಓ ಗಿರಿಜ, ಚಿತ್ರದುರ್ಗ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ದೇವರಾಜ್, ನಾಗರಾಜ್, ವಿಕಾಸ್, ಗ್ರಾಮಸ್ಥರಾದ ವೀರಪ್ಪ, ದೋಮಣ್ಣ, ಕುಬೇರಪ್ಪ ಶಿವಣ್ಣ ನಿಜಲಿಂಗಪ್ಪ ರಂಗಸ್ವಾಮಿ ಸಿದ್ದೇಶ್ ಮನು ರಮೇಶ್ ಬಸವರಾಜ್ ಚಂದ್ರಪ್ಪ ನಾಗರಾಜ್ ರವಿ ಗೋಲಿಗಪ್ಪ ನಾಗೇಶ್ ಲೋಕೇಶ್ ಶಶಿಧರ್ ತಿಪ್ಪೇಸ್ವಾಮಿ ರಮೇಶ್, ಈರಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
































