ಭೋಪಾಲ್ : ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ರಕ್ತದಾನ ಪಡೆದ 6 ಮಕ್ಕಳಿಗೆ ಎಚ್ಐವಿ ಸೋಂಕು ತಗುಲಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದ್ದು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಭಾರಿ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಮೂವರು ಆರೋಗ್ಯ ಸಿಬ್ಬಂದಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ.
ಥಲಸ್ಸೆಮಿಯಾದಿಂದ ಬಳಲುತ್ತಿದ್ದ 15 ವರ್ಷದೊಳಗಿನ 6 ಮಕ್ಕಳಿಗೆ ರಕ್ತ ಕೊಡುವಾಗ ವೈದ್ಯರು ಎಡವಟ್ಟು ಮಾಡಿದ್ದಾರೆ. ಬಾಧಿತ ಮಕ್ಕಳಿಗಾಗಿ 3 ಬ್ಯಾಂಕ್ಗಳಿಂದ 189 ಯೂನಿಟ್ ರಕ್ತವನ್ನ ಸಂಗ್ರಹಿಸಲಾಗಿತ್ತು. ಈ ರಕ್ತವನ್ನ 150ಕ್ಕೂ ಹೆಚ್ಚು ದಾನಿಗಳಿಂದ ಈ ರಕ್ತ ಪಡೆಯಲಾಗಿತ್ತು. ಆದರೆ ರಕ್ತಪರೀಕ್ಷೆ ಸಂದರ್ಭದಲ್ಲಿ ಉಂಟಾದ ವೈಫಲ್ಯದಿಂದ ಐವರು ಮಕ್ಕಳಿಗೆ ಸೋಂಕು ತಗುಲಿದೆ. ದಾನ ಪಡೆದ ರಕ್ತವನ್ನ ಮಕ್ಕಳಿಗೆ ನೀಡಿದ ಬಳಿಕ ಸೋಂಕು ತಗುಲಿದೆ. ಇದು ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಕಂಡ ಅತಿದೊಡ್ಡ ಆರೋಗ್ಯ ವೈಫಲ್ಯವಾಗಿದೆ.
ಘಟನೆ ಸಂಬಂಧ ಮೂವರು ಆರೋಗ್ಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಸೋಂಕಿತರ ರಕ್ತವನ್ನ ಮಕ್ಕಳಿಗೆ ನೀಡಲಾಗಿದೆ ಎಂಬ ಪ್ರಕರಣದ ತನಿಖೆಗೆ ರಚಿಸಲಾಗಿರುವ ಸಮಿತಿ ಪ್ರಾಥಮಿಕ ವರದಿಯ ಆಧಾರದಲ್ಲಿ ಗುರುವಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳಿಗೆ ಎಚ್ಐವಿ ಸೋಂಕು ತಗುಲಿರುವ ಪ್ರಕರಣ ತನಿಖೆ ಸಲುವಾಗಿ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡಿಸೆಂಬರ್ 16ರಂದು ಸಮಿತಿ ರಚಿಸಿತ್ತು. ವರದಿಯ ಬೆನ್ನಲ್ಲೇ ರಕ್ತ ಬ್ಯಾಂಕ್ನ ಉಸ್ತುವಾರಿ ಡಾ.ದೇವೇಂದ್ರ ಪಟೇಳ್, ಪ್ರಯೋಗಾಲಯದ ತಂತ್ರಜ್ಞ ರಾಮ್ ಭಾಯ್ ತ್ರಿಪಾಠಿ ಮತ್ತು ನಂದಲಾಲ್ ಪಾಂಡೆ ಎಂಬವರನ್ನ ಅಮಾನತು ಮಾಡಿದೆ. ಹಾಗೆಯೇ, ಜಿಲ್ಲಾ ಆಸ್ಪತ್ರೆಯಲ್ಲಿ ಸಿವಿಲ್ ಸರ್ಜನ್ ಆಗಿದ್ದ ಮನೋಜ್ ಶುಕ್ಲಾ ಅವರಿಗೂ ಶೋಕಾಸ್ ನೋಟಿಸ್ ನೀಡಲಾಗಿದ್ದು, ಲಿಖಿತ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಪ್ರತಿಕ್ರಿಯೆ ಸಮಂಜಸವಾಗಿದೆ ಎನಿಸದಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.
ಎಚ್ಐವಿ ಸೋಂಕಿತರ ರಕ್ತಪೂರಣದಿಂದಾಗಿ 12 ರಿಂದ 15 ವರ್ಷದೊಳಗಿನ 6 ಮಕ್ಕಳಲ್ಲಿ ಇತ್ತೀಚೆಗೆ ಎಚ್ಐವಿ ದೃಢಪಟ್ಟಿತ್ತು. ನಂತರ ಒಬ್ಬರು ಫೋಷಕರಲ್ಲೂ ಸೋಂಕು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದರು.
































