ಚಿತ್ರದುರ್ಗ : ಜಿಲ್ಲೆಯ ಬಹುಕಾಲದ ಬೇಡಿಕೆಯಾದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಹಾಗೂ ರೈಲ್ವೆ ಕೆಳಸೇತುವೆಗಳ ಅವ್ಯವಸ್ಥೆ ಸರಿಪಡಿಸುವಂತೆ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸಲ್ಲಿಸಿದ್ದ ಮನವಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಶಾಸಕರು ಪತ್ರದ ಮೂಲಕ ಸಲ್ಲಿಸಿದ್ದ ದೂರುಗಳಿಗೆ ಲಿಖಿತವಾಗಿ ಉತ್ತರಿಸಿರುವ ಸಚಿವರು, ವಿವಿಧ ಯೋಜನೆಗಳ ಪ್ರಗತಿ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಚಿತ್ರದುರ್ಗ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೂರು ಪ್ರಮುಖ ರೈಲ್ವೆ ಗೇಟ್ಗಳಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಪ್ರಕ್ರಿಯೆ ಚುರುಕುಗೊಂಡಿದೆ.
ಕವಾಡಿಗರಹಟ್ಟಿ ಬಳಿಯ ರೈಲ್ವೆ ಗೇಟ್:
ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಕವಾಡಿಗರಹಟ್ಟಿ ಬಳಿಯ ಅಮೃತಪುರ ಮತ್ತು ಚಿತ್ರದುರ್ಗ ನಿಲ್ದಾಣಗಳ ನಡುವಿನ ರೈಲ್ವೆಗೇಟ್ ಸಂಖ್ಯೆ 20 ರಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಸಬ್ವೇ ನಿರ್ಮಾಣಕ್ಕೆ ಈಗಾಗಲೆ ಮಂಜೂರಾತಿ ನೀಡಲಾಗಿದ್ದು, ಇದರ ಸಾಮಾನ್ಯ ವಿನ್ಯಾಸ ನಕ್ಷೆ ಅನುಮೋದನೆಗೊಂಡಿರುತ್ತದೆ. ಈ ಪ್ರದೇಶದಲ್ಲಿ ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿ ವಿಭಾಗ ವತಿಯಿಂದ ಹೆದ್ದಾರಿ ನಿರ್ಮಾಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.
ದಾವಣಗೆರೆ ರಸ್ತೆ ರೈಲ್ವೆ ಗೇಟ್:
ಚಿತ್ರದುರ್ಗ- ದಾವಣಗೆರೆ ರಸ್ತೆಯಲ್ಲಿರುವ ರೈಲ್ವೆಸ್ಟೇಷನ್ ಹತ್ತಿರದ ರೈಲ್ವೆ ಗೇಟ್ ಸಂಖ್ಯೆ 22, ಚಿತ್ರದುರ್ಗ ಮತ್ತು ಬಾಲೇನಹಳ್ಳಿ ನಿಲ್ದಾಣಗಳ ನಡುವೆ, ವೆಚ್ಚ ಹಂಚಿಕೆ ಆಧಾರದ ಮೇಲೆ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಪ್ರಸ್ತುತ ನಕ್ಷೆ ಸಿದ್ಧಪಡಿಸಲಾಗುತ್ತಿದೆ.
ಭೀಮಸಮುದ್ರ ರಸ್ತೆ ರೈಲ್ವೆ ಗೇಟ್: ಚಿತ್ರದುರ್ಗ ನಗರದ ಭೀಮಸಮುದ್ರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬರುವ ರೈಲ್ವೆಗೇಟ್ ಸಂಖ್ಯೆ 15, ಅಮೃತಪುರ ಮತ್ತು ಚಿತ್ರದುರ್ಗ ನಡುವಿನ ಈ ಮೇಲ್ಸೇತುವೆಗೆ ನಕ್ಷೆ ಅನುಮೋದನೆಯಾಗಿದೆ. ವೆಚ್ಚ ಹಂಚಿಕೆ ಆಧಾರದಲ್ಲಿ ಈ ಯೋಜನೆ ಅನುಮೋದನೆಯಾಗಿತ್ತು. ಆದರೆ ಪರಿಷ್ಕøತ ಅಂದಾಜು ಪಟ್ಟಿಯಂತೆ ಪ್ರಸ್ತುತ ರೈಲ್ವೆ ಇಲಾಖೆಯಿಂದಲೇ ಶೇ.100 ರಷ್ಟು ವೆಚ್ಚದ ಮೊತ್ತದ ಕಾಮಗಾರಿ ಮಂಜೂರಾಗಿದೆ. ಸದ್ಯ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.
ಕೆಳಸೇತುವೆಗಳ ಸುಧಾರಣೆಗೆ ಕ್ರಮ:
ಮಳೆಗಾಲದಲ್ಲಿ ಕೆಳಸೇತುವೆಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಮನಗಂಡು ರೈಲ್ವೆ ಸಚಿವಾಲಯ ತುರ್ತು ಕ್ರಮ ಕೈಗೊಂಡಿದೆ.
ಚಿತ್ರದುರ್ಗ-ತುರುವನೂರು ರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ನಿರಂತರ ನಿಗಾ ವಹಿಸಲು ಮತ್ತು ಮೋಟಾರ್ ಪಂಪ್ ನಿರ್ವಹಿಸಲು 24 ಗಂಟೆಗಳ ಕಾಲ ವಾಚ್ಮನ್ ನಿಯೋಜಿಸಲಾಗಿದೆ. ಮಾನಂಗಿ ಗ್ರಾಮದ ರೈಲ್ವೆ ಕೆಳಸೇತುವೆಯ ಚರಂಡಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಸದ್ಯಕ್ಕೆ ಅಲ್ಲಿ ನೀರು ನಿಲ್ಲುವ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿದೆ. ಕುರುಬರಹಳ್ಳಿ, ರಟ್ಟಿಹಳ್ಳಿ ಮತ್ತು ಬೆಟ್ಟದ ನಾಗೇನಹಳ್ಳಿ ಈ ಭಾಗದ ರೈಲ್ವೆ ಕೆಳಸೇತುವೆಗಳಲ್ಲಿ ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪಪ್ಪಿ’ಸ್ ಸ್ಟೂಡೆಂಟ್ ವಿಂಗ್ ಸಂಘಟನೆಯು ಕೂಡ ಚಿತ್ರದುರ್ಗದ ಮೆದೇಹಳ್ಳಿ ಮತ್ತು ಗೋನೂರು ರಸ್ತೆ ರೈಲ್ವೆ ಕೆಳಸೇತುವೆಗಳಲ್ಲಿ ಕಳೆದ 6-7 ವರ್ಷಗಳಿಂದ ಮಳೆ ನೀರಿನ ಸಮಸ್ಯೆಯಿಂದಾಗಿ ಬಹಳ ಗುಂಡಿಗಳು ಬಿದ್ದಿರುತ್ತವೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ಬಹು ವರ್ಷದಿಂದ ಇರುವ ಈ ಸಮಸ್ಯೆ ಸರಿಪಡಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದರು.

































