ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಒಂಬತ್ತನೇ ಕೇಂದ್ರ ಬಜೆಟ್ನಲ್ಲಿ ಘೋಷಿಸಿರುವ ಗ್ಲೋಬಲ್ ಬಿಗ್ ಕ್ಯಾಟ್ ಅಲಯನ್ಸ್ ಯೋಜನೆ ಘೋಷಣೆಯ ಬಳಿಕ, ಈ ವರ್ಷದ ಅಂತಾರಾಷ್ಟ್ರೀಯ ಹುಲಿ ಶೃಂಗಸಭೆ ಭಾರತದಲ್ಲಿ ಆಯೋಜಿಸಲು ಸಿದ್ಧತೆಗಳು ಜೋರಾಗಿವೆ. ವಿಶೇಷವಾಗಿ, ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳು ಈ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿವೆ.
ಫೆಬ್ರವರಿ 9ರಿಂದ 13ರವರೆಗೆ ನಡೆಯಲಿರುವ ಈ ಶೃಂಗಸಭೆ ಮತ್ತು ತರಬೇತಿ ಕಾರ್ಯಕ್ರಮವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಸಂಯುಕ್ತವಾಗಿ ಆಯೋಜಿಸುತ್ತಿವೆ. ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಕಾರ್ಯಕ್ರಮವು, ದಕ್ಷಿಣ ಭಾರತದ ವನ್ಯಜೀವಿ ಸಂರಕ್ಷಣೆಯ ಕುರಿತು ಜಾಗತಿಕ ಗಮನ ಸೆಳೆಯುವ ಉದ್ದೇಶ ಹೊಂದಿದೆ.
ಸಭೆಯ ಮೊದಲ ಎರಡು ದಿನ, ಬಂಡೀಪುರದಲ್ಲಿ 18 ದೇಶಗಳ ಪ್ರತಿನಿಧಿಗಳು ಮತ್ತು ದೇಶದ ಎಲ್ಲಾ ರಾಜ್ಯಗಳ ಅರಣ್ಯಾಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆಬ್ರವರಿ 11 ಮತ್ತು 12 ರಂದು ಕಾರ್ಯಕ್ರಮ ನಾಗರಹೊಳೆ ಹಬ್ಬದಲ್ಲಿ ಮುಂದುವರಿಯಲಿದೆ. 2023ರಲ್ಲಿ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಲಿ ಗಣತಿ ವರದಿ ಬಿಡುಗಡೆ ವೇಳೆ ಈ ಯೋಜನೆಯನ್ನು ಘೋಷಿಸಿದ್ದರು.
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದ್ದು, ಚಿರತೆ, ಹಿಮ ಚಿರತೆ ಸೇರಿದಂತೆ ವಿವಿಧ ಬಿಗ್ ಕ್ಯಾಟ್ಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಶೃಂಗಸಭೆಯಲ್ಲಿ, ಸಂರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಕೆ, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಸಹಕಾರ, ಉತ್ತಮ ಕಾರ್ಯಪದ್ಧತಿಗಳ ವಿನಿಮಯ, ಅರಣ್ಯ ನಿವಾಸಿಗಳ ಪುನರ್ವಸತಿ, ಹುಲಿ ವಾಸಸ್ಥಾನಗಳಲ್ಲಿ ಅಭಿವೃದ್ಧಿ ಯೋಜನೆಗಳ ನಿಯಂತ್ರಣ, ಸ್ವತಂತ್ರ ವಿಮರ್ಶೆಗೆ ಅವಕಾಶ ನೀಡುವಂತೆ ಚರ್ಚೆಗಳು ನಡೆಯಲಿವೆ.
ಈ ಶೃಂಗಸಭೆಯ ಮೂಲಕ ಭಾರತ, ವಿಶ್ವದ ಹೈಪ್ರೊಫೈಲ್ ಬಿಗ್ ಕ್ಯಾಟ್ ಸಂರಕ್ಷಣಾ ಚರ್ಚೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ನಿರೀಕ್ಷಿಸಲಾಗುತ್ತಿದೆ. ದಕ್ಷಿಣ ಭಾರತದ ವನ್ಯಜೀವಿ ಸಂರಕ್ಷಣೆಗೆ ಇದು ಹೊಸ ತಿರುವು ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಡಿಸಿದ್ದಾರೆ.

































