ನವದೆಹಲಿ : ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಇಂತಹ ಕಠಿಣ ಪಯಣವನ್ನು ಯಶಸ್ವಿಯಾಗಿ ಮುಗಿಸಿ, ಗೂಗಲ್ನಂತಹ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗವನ್ನು ತೊರೆದು IAS ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡವರು ಅನುದೀಪ್ ದುರಿಶೆಟ್ಟಿ.
ತೆಲಂಗಾಣ ಮೂಲದ ಅನುದೀಪ್ ದುರಿಶೆಟ್ಟಿ ಶಾಲಾ ಶಿಕ್ಷಣವನ್ನು ಶ್ರೀ ಸೂರ್ಯೋದಯ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಬಿಟ್ಸ್ ಪಿಲಾನಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ನಲ್ಲಿ 2011ರಲ್ಲಿ ಪದವಿ ಪಡೆದರು. ಆರಂಭದಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲೇ ವೃತ್ತಿಜೀವನ ರೂಪಿಸಬೇಕೆಂಬ ಉದ್ದೇಶ ಹೊಂದಿದ್ದ ಅನುದೀಪ್, ಮುಂದೆ ಯುಪಿಎಸ್ಸಿ ಪರೀಕ್ಷೆಯತ್ತ ಆಕರ್ಷಿತರಾದರು.
ಎಂಜಿನಿಯರಿಂಗ್ ಮುಗಿಸಿದ ಬಳಿಕ ಅವರು ಗೂಗಲ್ನಂತಹ ಪ್ರತಿಷ್ಠಿತ ತಂತ್ರಜ್ಞಾನ ಕಂಪನಿಯಲ್ಲಿ ಉದ್ಯೋಗ ಪಡೆದು ಲಕ್ಷಾಂತರ ರೂಪಾಯಿ ಸಂಬಳ ಗಳಿಸುತ್ತಿದ್ದರು. ಆದರೂ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಅವರನ್ನು ಬಿಡಲಿಲ್ಲ. ಹಗಲಿನಲ್ಲಿ ಕೆಲಸ, ರಾತ್ರಿ ಯುಪಿಎಸ್ಸಿ ಅಧ್ಯಯನ ಎಂಬಂತೆ ಅವರು ತಮ್ಮ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡರು.
2012ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅನುದೀಪ್ ವಿಫಲರಾದರು. ಆದರೆ ಅವರು ಹಿಂಜರಿಯಲಿಲ್ಲ. 2013ರಲ್ಲಿ ಮತ್ತೆ ಪರೀಕ್ಷೆ ಬರೆದು ಅಖಿಲ ಭಾರತ 790ನೇ ರ್ಯಾಂಕ್ ಪಡೆದು ಭಾರತೀಯ ಕಂದಾಯ ಸೇವೆ (IRS)ಗೆ ಆಯ್ಕೆಯಾದರು. ನಂತರ ಅವರು ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದರು.
ಐಆರ್ಎಸ್ ಅಧಿಕಾರಿಯಾಗಿದ್ದರೂ, ಐಎಎಸ್ ಅಧಿಕಾರಿಯಾಗುವ ಕನಸು ಅವರ ಮನದಲ್ಲಿ ಜೀವಂತವಾಗಿಯೇ ಇತ್ತು. 2014 ಮತ್ತು 2015ರಲ್ಲಿ ಮತ್ತೆ ಯುಪಿಎಸ್ಸಿ ಪರೀಕ್ಷೆ ಬರೆದರೂ ನಿರೀಕ್ಷಿತ ಫಲಿತಾಂಶ ದೊರಕಲಿಲ್ಲ. ಆದರೆ ತಮ್ಮ ತಪ್ಪುಗಳಿಂದ ಪಾಠ ಕಲಿತ ಅನುದೀಪ್, ಯಾವುದೇ ಕೋಚಿಂಗ್ ಇಲ್ಲದೆ ತಯಾರಿ ಮುಂದುವರಿಸಿದರು.
ಅವರ ಅಚಲ ಪರಿಶ್ರಮಕ್ಕೆ 2017ರಲ್ಲಿ ಭರ್ಜರಿ ಫಲ ದೊರಕಿತು. ಅನುದೀಪ್ ದುರಿಶೆಟ್ಟಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಪ್ರಥಮ ರ್ಯಾಂಕ್ (AIR-1) ಪಡೆದು ದೇಶದ ಟಾಪರ್ ಆಗಿ ಹೊರಹೊಮ್ಮಿದರು.
ಅನುದೀಪ್ ದುರಿಶೆಟ್ಟಿ ಅವರ ಜೀವನಯಾನ, ಕನಸುಗಳನ್ನು ಸಾಧಿಸಲು ಎಷ್ಟೇ ವಿಫಲತೆಗಳು ಎದುರಾದರೂ, ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಯಶಸ್ಸು ಖಚಿತ ಎಂಬುದಕ್ಕೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.
































