ಚಿತ್ರದುರ್ಗ: ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಅಧೀನದ ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು-12 ಹುದ್ದೆ, ಹಿರಿಯ ವೈದ್ಯಾಧಿಕಾರಿಗಳು-03 ಹುದ್ದೆ ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು-07 ಹುದ್ದೆಗಳು ಸೇರಿದಂತೆ ಒಟ್ಟು 22 ಹುದ್ದೆಗಳಿಗೆ ಎಂ.ಬಿ.ಬಿ.ಎಸ್ ಪದವೀಧರ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಅಥವಾ ಖಾಯಂ ವೈದ್ಯರನ್ನು ನೇಮಿಸುವವರಿಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಸಂದರ್ಶನ ಮೂಲಕ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದ್ದು, ಈ ಸಂದರ್ಶನವು ಇದೇ ಫೆ.10ರಂದು ಏರ್ಪಡಿಸಲಾಗಿದೆ.
ಇಚ್ಚೆಯುಳ್ಳ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಚಿತ್ರದುರ್ಗ ಇಲ್ಲಿಗೆ ಸಂದರ್ಶನಕ್ಕೆ ಬಯೋಡಾಟ ಮತ್ತು ಹುದ್ದೆಗೆ ಸಂಬಂಧಿಸಿದ ಅಗತ್ಯ ಮೂಲ ದಾಖಲಾತಿಗಳ ಹಾಗೂ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಲು ಸೂಚಿಸಿದೆ.
ಈ ಸಂದರ್ಶನವು ಇದೇ ಫೆ.10 ರಿಂದ ಹುದ್ದೆಗಳ ನೇಮಕಾತಿ ಪೂರ್ಣಗೊಳ್ಳುವವರೆಗೂ ಪ್ರತಿದಿನ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದ್ದಾರೆ.




























