ಬೆಂಗಳೂರು: ಹಿಂದೆ ಪತ್ರಿಕೆಗಳಲ್ಲಿನ ಸುದ್ದಿ ಮನೆಯಲ್ಲಿ ಅಂದಿನ ಸುದ್ದಿಯ ಮೇಲೆ ಪತ್ರಿಕೆಯ ಕಲಾವಿದರು ರಚಿಸಿದ ಕಾರ್ಟೂನುಗಳನ್ನು ಇಟ್ಟುಕೊಂಡು ಅದರ ಮೇಲೆ ಸುದ್ದಿ ರಚನೆಯಾಗುತ್ತಿತ್ತು ಆದರೆ ಈಗ ಸುದ್ದಿಯ ನಡುವು ಕಾರ್ಟೂನುಗಳನ್ನು ಹುಡುಕಬೇಕಾದ ಪರಿಸ್ಥಿತಿ ಬಂದೊದಗಿರುವುದು ವಿಷಾದನೀಯ ಎಂದು ಪತ್ರಕರ್ತ, ಲೇಖಕ ಜಿ.ಎನ್. ಮೋಹನ್ ವಿಷಾದ ವ್ಯಕ್ತ ಪಡಿಸಿದರು.
ಅವರು ಇಂದು ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಇಂದು ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ವತಿಯಿಂದ ಉದ್ಘಾಟನೆಗೊಂಡ ಮೂರು ದಿನಗಳ ವಾರ್ಷಿಕ ವ್ಯಂಗ್ಯ ಚಿತ್ರ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತಾವು ಬಹಳವಾಗಿ ಇಷ್ಟ ಪಡುತ್ತಿದ್ದ ಕಾರ್ಟೂನಿಷ್ಟರ ಮುಂದೆ ಈ ರೀತಿ ಅತಿಥಿಯಾಗಿ ಭಾಗವಹಿಸುತ್ತೇನೆಂದು ಕನಸಿನಲ್ಲಿಯೂ ಕಲ್ಪಿಸಿರಲಿಲ್ಲ ಎಂದು ತಮ್ಮ ಸಂತೋಷ ವ್ಯಕ್ತ ಪಡಿಸಿದರು.
ಇದೇ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಿರಿಯ ವ್ಯಂಗ್ಯಚಿತ್ರಕಾರ ಬಿ ವಿ ಪಾಂಡುರಂಗರಾವ್ ಅವರು ತಾವು ಹಿಂದೆ ಇದೇ ಸಂಘದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆಯ ದಿನಗಳನ್ನು ಮೆಲುಕು ಹಾಕಿದರು. ಸಮಾರಂಭದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ವಿ. ಆರ್. ಸಿ. ಶೇಖರ್ ಹಾಗೂ ೨೦೨೫ ರ ಹಾಲಭಾವಿ ರಾಷ್ಟ್ರೀಯ ಕಲಾ ಪ್ರಶಸ್ತಿ ಪುರಸ್ಕಾರ ಪಡೆದ ಹಿರಿಯ ವ್ಯಂಗ್ಯಚಿತ್ರಕಾರ ಬಿ ಜಿ ಗುಜ್ಜಾರಪ್ಪ ಇವರೀರ್ವರಿಗೆ ಸಂಘದ ವತಿಯಿಂದ ಗೌರವಾರ್ಪಣೆ ಸಲ್ಲಿಸಿ, ಸನ್ಮಾನಿಸಲಾಯಿತು. ಹಾಗೆಯೆ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ವೈ ಎಸ್ ನಂಜುಂಡಸ್ವಾಮಿ ಮಾತನಾಡಿ, ಈ ಪ್ರದರ್ಶನದ ಯಶಸ್ಸಿಗೆ ಕಾರಣರಾದ ಸಂಘದ ಎಲ್ಲ ಪದಾಧಿಕಾರಿಗಳ ಸೇವೆಯನ್ನು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಇಂಥಹದೇ ವ್ಯಂಗ್ಯಚಿತ್ರ ಪ್ರದರ್ಶನಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ನಡೆಸುವ ಯೋಜನೆಯಿದೆ ಎಂದು ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ದಾವಣಗೆರೆಯ ಡಾ. ಎಚ್ ಬಿ ಮಂಜುನಾಥ್, ಮಣಿಪಾಲದ ಜೇಮ್ಸ್ ವಾಜ್, ಶಿವಮೊಗ್ಗೆಯ ರಾಮಧ್ಯಾನಿ ಇವರನ್ನು ವಿಶೇಷ ಆಹ್ವಾನಿತರಾಗಿ ಸಂಘದ ವತಿಯಿಂದ ಗೌರವಿಸಲಾಯಿತು.

































