ಚಿತ್ರದುರ್ಗ: ಒಳಮೀಸಲಾತಿ ಅನುಷ್ಠಾನಗೊಳಿಸಿ 56,432 ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿ ಹಿರಿಯೂರು ಅದಿಜಾಂಬವ ಮಠದ ಷಡಕ್ಷರ ದೇಶಿಕೇಂದ್ರ ಷಡಕ್ಷರಿ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆ ಚಿತ್ರದುರ್ಗ ನಗರದಿಂದ ಬೆಂಗಳೂರು ಕಡೆಗೆ ತಲುಪಿತು.
ದಾವಣಗೆರೆಯಿಂದ ಕೈಗೊಂಡಿರುವ ಒಳ ಮೀಸಲಾತಿ ಅನುಷ್ಠಾನ ಪಾದಯಾತ್ರೆ ಚಿತ್ರದುರ್ಗ ನಗರದ ಮಾದರ ಚೆನ್ನಯ್ಯ ಗುರು ಪೀಠದಿಂದ ಬೆಂಗಳೂರಿನ ಕಡೆಗೆ ಪ್ರಾರಂಭಗೊಂಡಿತು, ರಸ್ತೆ ಉದ್ದಕ್ಕೂ ದಲಿತ ಸಮುದಾಯದ ಮುಖಂಡರು ಸ್ವಾಮೀಜಿಯವರ ಪಾದಯಾತ್ರೆಗೆ ಸಾಥ್ ನೀಡಿದ್ದು, ಒಳ ಮೀಸಲಾತಿಯನ್ನು ಜಾರಿ ಮಾಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು.
ಪಾದಯಾತ್ರೆಯನ್ನ ಉದ್ದೇಶಿಸಿ ಷಡಕ್ಷರಿ ಸ್ವಾಮೀಜಿ ಮಾತನಾಡಿ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರುವುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಜೊತೆಗೆ ಎಲ್ಲಾ ಆಯೋಗಗಳು ಮಾದಿಗರಿಗೆ ಶೇ 6ರಷ್ಟು ಮೀಸಲಾತಿ ನೀಡಬೇಕೆಂದು ವರದಿ ನೀಡಿವೆ. ಇದನ್ನು ಸಿದ್ದರಾಮಯ್ಯ ಸರ್ಕಾರ ಒಪ್ಪಿಕೊಂಡು ಕಾನೂನು ಮಾಡಿದೆ. ಆದರೆ, ಈಗ ಇಲ್ಲಸಲ್ಲದ ನೆಪ ಹೇಳುತ್ತಿರುವುದು ಸರಿಯಲ್ಲ. ಹುದ್ದೆಗಳನ್ನು ತುಂಬಲು ಪ್ರಕ್ರಿಯೆ ಆರಂಭಿಸಿರುವುದು ಮಾದಿಗರ ವಿರೋಧಿ ನಡೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ಮಾದರ ಚೆನ್ನಯ್ಯ ಸೇವಾ ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಸ್ವಾಮಿ ಮಾತನಾಡಿ
ಒಳಮೀಸಲಾತಿ ಮಾದಿಗ ಸಮುದಾಯದವರ ಮೂಲ ಸ್ವರೂಪವಾಗಿದೆ, ಈ ಮೀಸಲಾತಿಯನ್ನು ಸರ್ಕಾರ ಜಾರಿಗೊಳಿಸದೆ ನಿರ್ಲಕ್ಷ ವಹಿಸುತ್ತಿರುವುದು ಬೇಸರದ ವಿಚಾರವಾಗಿದೆ, ಸಮುದಾಯದಲ್ಲಿ ಸಾಕಷ್ಟು ನಿರುದ್ಯೋಗಿಗಳು ಹೆಚ್ಚುತ್ತಿದ್ದಾರೆ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಹುದ್ದೆಗಳನ್ನು ಒಳ ಮೀಸಲಾತಿಯ ಅನುಸಾರವಾಗಿ ತುಂಬಿಕೊಳ್ಳಬೇಕಿದೆ, ಒಳ ಮೀಸಲಾತಿಯ ಪಡೆಯುವ ನಿಟ್ಟಿನಲ್ಲಿ ನಿರಂತರವಾಗಿ ರಾಜ್ಯದಲ್ಲೆಡೆ ಹೋರಾಟಗಳು ನಡೆಯುತ್ತಿವೆ, ಈ ಒಂದು ನಿಟ್ಟಿನಲ್ಲಿ ಷಡಕ್ಷರಿ ಸ್ವಾಮಿಜಿಯವರು ಮಾಡುತ್ತಿರುವ ಹೋರಾಟಕ್ಕೆ ಸಮುದಾಯದವರು ಕೈಜೋಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

































