ಚಿತ್ರದುರ್ಗ: ಯುವಜನತೆ ತಂಬಾಕಿನ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಗಟ್ಟಲು ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ತನಿಖಾ ತಂಡವು ಚಳ್ಳಕೆರೆ ನಗರ ಪ್ರದೇಶದ ವಿವಿಧೆಡೆ ಬುಧವಾರ ಜಂಟಿ ಕಾರ್ಯಾಚರಣೆ ನಡೆಸಿತು.
ಚಳ್ಳಕೆರೆ ನಗರದ ಪ್ರದೇಶದ ವಿವಿಧೆಡೆ ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಆರೋಗ್ಯ ಇಲಾಖೆ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ತಂಡವು ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕೋಟ್ಪಾ-2003ರ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಿತು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ಸಂಬಂಧ ಸೆಕ್ಷನ್-4ರ ಅಡಿಯಲ್ಲಿ 31 ಪ್ರಕರಣಗಳನ್ನು ದಾಖಲಿಸಿ ರೂ.3,100 ದಂಡ ವಸೂಲಿ ಮಾಡಲಾಯಿತು. ಅಂತೆಯೇ, ನಿಯಮ ಬಾಹಿರವಾಗಿ ತಂಬಾಕು ಮಾರಾಟ ಮಾಡಿದ ಸಂಬಂಧ ಸೆಕ್ಷನ್-6ಎ ಅಡಿಯಲ್ಲಿ 2 ಪ್ರಕರಣ ದಾಖಲಿಸಿ ರೂ.200 ದಂಡ ವಿಧಿಸಲಾಯಿತು.
ಯುವಜನತೆಯು ಅತೀ ಹೆಚ್ಚಾಗಿ ತಂಬಾಕಿನ ವ್ಯಸನಕ್ಕೆ ಒಳಗಾಗುತ್ತಿರುವುದರಿಂದ ಸಮಾಜದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಅಂಗಡಿಗಳಲ್ಲಿ ಕಡ್ಡಾಯವಾಗಿ ಸೆಕ್ಷನ್-4, 6ಎ ಮತ್ತು 6ಬಿ ಫಲಕಗಳನ್ನು ಹಾಕುವಂತೆ ಸೂಚಿಸಿದ ಅಧಿಕಾರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಮತ್ತು ತಂಬಾಕು ಜಗಿದು ಉಗಿಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ, ಅಬಕಾರಿ ಇನ್ಸ್ಪೆಕ್ಟರ್ ಗಂಗರಾಜು, ಆರೋಗ್ಯ ನಿರೀಕ್ಷಣಾಧಿಕಾರಿ ಅಮೃತ್ ರಾಜ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಡಿಇಓ ಸ್ವಾಮಿ ಇದ್ದರು.
































