ಚಿತ್ರದುರ್ಗ : ಮೂಲತಃ ಚಳ್ಳಕೆರೆ ತಾಲ್ಲೂಕಿನ ಕಾಟಂದೇವರ ಕೋಟೆಯ ಷರೀಫ್ ಎಂ. ಮುಖ್ಯಮಂತ್ರಿಗಳ ಚಿನ್ನದ ಪದಕ ಗಳಿಸಿ ಪೊಲೀಸ್ ಇಲಾಖೆಗೆ ಕೀರ್ತಿ ತಂದಿದ್ದಾರೆ.
ಚಿತ್ರದುರ್ಗದ ಮಹಾರಾಣಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ 2008-10 ನೇ ಸಾಲಿನಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡಿದ ಷರೀಫ್ ಎಂ. ಕಡುಬಡತನದಲ್ಲಿ ಬೆಳೆದವರು. ನಂತರ ಕೂಡ್ಲಿಗಿ ತಾಲ್ಲೂಕಿನ ಸುಲ್ತಾನಿಪುರದಲ್ಲಿರುವ ಸಹೋದರಿಯ ನೆರವು ಪಡೆದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2014 ರಲ್ಲಿ ಕೆ.ಎಸ್.ಐ.ಎಸ್.ಎಫ್. ಪೊಲೀಸ್ ಕಾನ್ಸ್ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಗೊಂಡರು. ಬುನಾದಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಆಂತರಿಕ ವಿಭಾಗದ ತಾಂತ್ರಿಕ ವಿಭಾಗಕ್ಕೆ ನಿಯೋಜಿಸಲಾಯಿತು. ಬಳಿಕ 2017 ರಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬೆಂಗಳೂರಿನಲ್ಲಿ ಕಾನ್ಸ್ಟೇಬಲ್ ಆಗಿ ಆಯ್ಕೆಗೊಂಡರು.
ತಾಂತ್ರಿಕತೆಯಲ್ಲಿ ನಿಪುಣನಾಗಿದ್ದ ಇವರಲ್ಲಿ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ಕಾಲ್ ಡೀಟೆಲ್ ರೆಕಾರ್ಡ್ಗಳ ವಿಶ್ಲೇಷಣೆಯಲ್ಲಿ ಅಪಾರ ಜ್ಞಾನ ಹೊಂದಿರುವುದನ್ನು ಗುರುತಿಸಿ ಇಲಾಖೆಗೆ ಸವಾಲಾಗಿರುವ ಪ್ರಕರಣಗಳ ಪತ್ತೆ ಜವಾಬ್ದಾರಿಯನ್ನು ವಹಿಸಲಾಯಿತು.
2017 ರಿಂದ ಇಲ್ಲಿಯವರೆಗೂ ನಡೆದ ಕೊಲೆ, ಮಾರಣಾಂತಿಕ ಹಲ್ಲೆ, ದ್ವಿಚಕ್ರ ವಾಹನ, ಮನೆಗಳ್ಳತನ, ರಾಬರಿ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಸೀಮಿತ ಅವಧಿಯಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಮೇಲಾಧಿಕಾರಿಗಳಿಗೆ ತಾಂತ್ರಿಕ ಸಹಾಯ ಒದಗಿಸುವುದರ ಜೊತೆಗೆ ನಿಪುಣತೆ, ನಿಷ್ಟೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಷರೀಫ್ ಎಂ. ಮುಖ್ಯಮಂತ್ರಿಗಳ 2025 ಸಾಲಿನ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷರಾದ ಎಸ್.ಸಂದೀಪ್ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿರುವ ಷರೀಫ್ ಎಂ.ಗೆ ಅಭಿನಂದಿಸಿದ್ದಾರೆ.

































